May 15, 2026
Friday, May 15, 2026
spot_img

ಹಂಪಿಯಲ್ಲಿ ಮಹತ್ವದ ಆವಿಷ್ಕಾರ: ಮಣ್ಣಿನಡಿಯಲ್ಲಿದ್ದ ವಿಜಯನಗರ ಕಾಲದ ದೇವಾಲಯದ ಅವಶೇಷಗಳು ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಂಪಿಯ ಐತಿಹಾಸಿಕ ಜೈನ ದೇವಾಲಯದ ಸಂಕೀರ್ಣದ ಬಳಿ ನಡೆಸಲಾದ ಉತ್ಖನನದ ವೇಳೆ ಪ್ರಾಚೀನ ದೇವಾಲಯವೊಂದರ ಮೇಲ್ಛಾವಣಿಯನ್ನು ಪತ್ತೆಹಚ್ಚುವ ಮೂಲಕ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI), ಹಂಪಿ ವೃತ್ತದ ಅಧಿಕಾರಿಗಳು ಪ್ರಮುಖ ಯಶಸ್ಸು ಸಾಧಿಸಿದ್ದಾರೆ

ವಿಜಯನಗರ ಕಾಲಕ್ಕೆ ಸೇರಿದ ಹಲವು ಪ್ರಾಚೀನ ರಚನೆಗಳು ಮಣ್ಣಿನಡಿಯಲ್ಲಿ ಹೂತುಹೋಗಿವೆ ಎಂದು ನಂಬಲಾದ ಜೈನ ದೇವಾಲಯ ಸಂಕೀರ್ಣದ ಸುತ್ತಮುತ್ತ ಹಮ್ಮಿಕೊಳ್ಳಲಾದ ವಿವರವಾದ ಪುರಾತತ್ವ ಪರಿಶೋಧನೆಯ ಭಾಗವಾಗಿ ಈ ಉತ್ಖನನವನ್ನು ಕೈಗೊಳ್ಳಲಾಗಿದೆ.

ಎಎಸ್‌ಐ (ASI) ಮೂಲಗಳ ಪ್ರಕಾರ, ಉತ್ಖನನ ತಂಡವು ದಪ್ಪನೆಯ ಮಣ್ಣಿನ ಪದರಗಳ ಅಡಿಯಲ್ಲಿ ಕಲ್ಲಿನ ಮೇಲ್ಛಾವಣಿಯನ್ನು ಪತ್ತೆಹಚ್ಚಿದ್ದು, ಇದು ಶತಮಾನಗಳಷ್ಟು ಹಳೆಯದಾದ ದೇವಾಲಯವೊಂದು ಅಸ್ತಿತ್ವದಲ್ಲಿರುವುದನ್ನು ಸೂಚಿಸುತ್ತದೆ.

ಈ ಬಗ್ಗೆ ಮಾಹಿತಿ ನೀಡಿರುವ ಹಂಪಿ ವೃತ್ತದ ಅಧೀಕ್ಷಕ ಪುರಾತತ್ವ ತಜ್ಞ ಕೆ. ರಾಮಕೃಷ್ಣ ರೆಡ್ಡಿ, ಪತ್ತೆಯಾಗಿರುವ ಈ ರಚನೆಯ ಉದ್ದ ಸುಮಾರು 4.35 ಮೀಟರ್ ಮತ್ತು ಅಗಲ 4.26 ಮೀಟರ್ ಇದೆ. ಪ್ರಾಥಮಿಕ ಅವಲೋಕನಗಳ ಪ್ರಕಾರ, ದೇವಾಲಯದ ಇಟ್ಟಿಗೆಯ ಶಿಖರವು ವರ್ಷಗಳ ಅವಧಿಯಲ್ಲಿ ತೀವ್ರವಾಗಿ ಹಾನಿಗೊಳಗಾಗಿದ್ದು, ಈಗ ಗರ್ಭಗೃಹದ ಮೇಲ್ಛಾವಣಿ ಮಾತ್ರ ಕಾಣಿಸುತ್ತಿದೆ ಎಂದು ತಿಳಿಸಿದ್ದಾರೆ.

ದೇವಾಲಯದ ಗೋಡೆಗಳು ಅಥವಾ ಭಿತ್ತಿಗಳು ಸುಮಾರು 10 ಅಡಿ ಅಂದಾಜು ಎತ್ತರದೊಂದಿಗೆ ಸುಸ್ಥಿತಿಯಲ್ಲಿರಬಹುದು ಎಂದು ಪುರಾತತ್ವಶಾಸ್ತ್ರಜ್ಞರು ನಂಬಿದ್ದಾರೆ. ಈ ಆವಿಷ್ಕಾರವು ಹಂಪಿಯ ಜೈನ ವಸಾಹತುಗಳ ಧಾರ್ಮಿಕ ಮತ್ತು ವಾಸ್ತುಶಿಲ್ಪದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದು ಹಂಪಿಯ ಜೈನ ವಲಯದಲ್ಲಿ ನಡೆದಿರುವ ಅತ್ಯಂತ ಪ್ರಮುಖ ಆವಿಷ್ಕಾರವಾಗಿದೆ. ಇದು ಮಣ್ಣಿನಡಿಯಲ್ಲಿ ವಾಸ್ತುಶಿಲ್ಪದ ಘಟಕಗಳೊಂದಿಗೆ ಸುಸ್ಥಿತಿಯಲ್ಲಿರುವ ದೇವಾಲಯವೊಂದು ಇರುವುದನ್ನು ಸೂಚಿಸುತ್ತದೆ ಎಂದು ಕೃಷ್ಣ ರೆಡ್ಡಿ ಹೇಳಿದ್ದಾರೆ.

ಇಟ್ಟಿಗೆಯ ಶಿಖರ ಹಾನಿಗೊಳಗಾಗಿದ್ದರೂ, ಗರ್ಭಗೃಹದ ಮೇಲ್ಛಾವಣಿ ಗೋಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಉತ್ಖನನ ನಡೆಸುವುದರಿಂದ ದೇವಾಲಯದ ಸಂಕೀರ್ಣಕ್ಕೆ ಸಂಬಂಧಿಸಿದ ಗೋಡೆಗಳು ಮತ್ತು ಇತರ ರಚನೆಗಳನ್ನು ಪತ್ತೆಹಚ್ಚಲು ಸಹಾಯವಾಗಬಹುದು. ಎಂದು ತಿಳಿಸಿದ್ದಾರೆ.

ಇನ್ನು, ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಕಾರ್ಯದರ್ಶಿ ವಿರೂಪಾಕ್ಷಿ ವಿ. ಹಂಪಿ, ಎಎಸ್‌ಐ ತಂಡದ ಈ ಆವಿಷ್ಕಾರವನ್ನು ಶ್ಲಾಘಿಸಿದ್ದಾರೆ. ಇಂತಹ ಸಂಶೋಧನೆಗಳು ವಿಜಯನಗರ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !