ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದೆಹಲಿ ಪ್ರವಾಸ ಮುಗಿಸಿ ನೇರವಾಗಿ ಧರ್ಮಸ್ಥಳಕ್ಕೆ ತೆರಳಿದ್ದಾರೆ. ಇಂದು ಬೆಳಗ್ಗೆಯೇ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರುಶನ ಪಡೆದಿದ್ದು, ಪೂಜೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಧರ್ಮಸ್ಥಳದಲ್ಲಿ ಈ ಹಿಂದೆ ಯೋಜಿಸಲಾಗಿದ್ದ ‘ಆಣೆ-ಪ್ರಮಾಣ’ ನಿರ್ಧಾರ ರದ್ದಾದ ಬೆನ್ನಲ್ಲೇ ವಿಜಯೇಂದ್ರ ಅವರು ಗುರುವಾರ ರಾತ್ರಿ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಇಂದಿನ ಭೇಟಿ ವೇಳೆ ದಕ್ಷಿಣ ಕನ್ನಡದ ಸಂಸದ ಬ್ರಿಜೇಶ್ ಚೌಟ ಮತ್ತು ಕರಾವಳಿ ಭಾಗದ ಶಾಸಕರು ಜತೆಯಲ್ಲಿದ್ದಾರೆ.
ವಿಧಾನಪರಿಷತ್ ಚುನಾವಣೆ ವೇಳೆ ಅಡ್ಡಮತದಾನದ ಚರ್ಚೆ ಮುನ್ನೆಲೆಗೆ ಬಂದಿತ್ತು. ಈ ವೇಳೆ ಸತ್ಯ ತಿಳಿಯಲು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ಶಾಸಕರಿಂದ ಆಣೆ ಪ್ರಮಾಣ ಮಾಡಿಸಲು ಯೋಚನೆ ಮಾಡಲಾಗಿತ್ತು. ಆದರೆ ಪವಿತ್ರ ಸ್ಥಳದಲ್ಲಿ ಇಂತಹ ರಾಜಕೀಯ ಸಭೆ ಬೇಡ ಎಂದು ಪಕ್ಷದ ಒಳಗೇ ಮಾತುಕತೆ ನಡೆದಿತ್ತು. ಧರ್ಮಸ್ಥಳದ ಸಭೆಯ ಯೋಜನೆಗೆ ಬ್ರೇಕ್ ಬಿದ್ದಿದ್ದೇ ತಡ ಇಡೀ ಗೊಂದಲಕ್ಕೆ ವಿಜಯೇಂದ್ರ ಅವರನ್ನು ದೂಷಿಸಲಾಗಿತ್ತು. ಇದರಿಂದ ತೀವ್ರ ಬೇಸರಗೊಂಡಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ, ಈಗ ಎಲ್ಲಾ ಶಾಸಕರನ್ನು ಕರೆದೊಯ್ಯುವ ನಿರ್ಧಾರ ಕೈಬಿಟ್ಟು ತಾವು ಒಬ್ಬರೇ ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರುಶನ ಮಾಡಿದ್ದಾರೆ.



