ಹೊಸದಿಗಂತ ವರದಿ ಶಿರಸಿ :
ಸರಳ ಸಜ್ಜನ ರಾಜಕಾರಣಿ ಎಂದೇ ಹೆಸರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಊರಿನ ಗ್ರಾಮ ಪಂಚಾಯಿತಿ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಸರಳತೆ ಮೆರೆಯುವ ಮೂಲಕ ಮತ್ತೊಮ್ಮೆ ತಮ್ಮ ಜನ ಸ್ನೇಹಿ ನೀತಿಯನ್ನು ಪರಿಚಯಿಸಿದರು.
ಮಂಗಳವಾರ ಕುಳವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಉಗ್ರೇಮನೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಉಗ್ರೇಮನೆ ದೇವಸ್ಥಾನಕ್ಕೆ ಸ್ವತಃ ಬೈಕ್ ಚಾಲನೆ ಮಾಡುತ್ತಾ ಹೊರಟರು. ರಸ್ತೆಯಲ್ಲಿ ಹಾಕಲಾದ ಜೆಲ್ಲಿ ರಾಶಿಗಳ ನಡುವೆ ಜನ ಸಾಮಾನ್ಯರಂತೆ ಬೈಕ್ ಓಡಿಸಿದ ಸ್ಪೀಕರ್ ಕಾಗೇರಿ ಅವರ ಸರಳತನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ನಂತರ ಕುಳವೆ ಗ್ರಾಮ ಪಂಚಾಯಿತಿಗೆ ಹೊಸದಾಗಿ ಬಂದ ಕಸ ವಿಲೇವಾರಿ ವಾಹನಕ್ಕೆ ಹರಿಸು ನಿಶಾನೆ ತೋರಿಸಿ ಸ್ವತಃ ತಾವೇ ಕಸ ವಿಲೇವಾರಿ ವಾಹನವನ್ನು ಓಡಿಸುವ ಮೂಲಕ ವಾಹನದ ಕಾರ್ಯಕ್ಷಮನೆತನ್ನು ಪರಿಕ್ಷೆ ಮಾಡಿದರು. ಈ ಸಂದರ್ಭದಲ್ಲಿ ನೆರೆದ ಸ್ಥಳೀಯರೆಲ್ಲರನ್ನು ಕರೆದು ಮಾತನಾಡಿಸುತ್ತಾ ಎಲ್ಲರಂತೆ ತಾವೂ ಬೆರೆಯುವ ಮೂಲಕ ಮತ್ತೊಮ್ಮೆ ಸರಳತೆ ಮೆರೆದರು.
ಈ ಹಿಂದೆ ತಮ್ಮ ಬಿಡುವಿನ ವೇಳೆಯಲ್ಲಿ ಊರಿನ ಮಕ್ಕಳೊಂದಿಗೆ ತಾವೂ ಮಕ್ಕಳಗಾಗಿ ಕ್ರಿಕೆಟ್ ಆಡಿದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಊಟ್ಟುರಿನ ಬರೂರಿನಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲೂ ಪಾಲ್ಗೊಂಡಿರುವ ಅವರು, ಶ್ರಮದಾನ ಸಹ ಮಾಡಿದ್ದರು. ಈ ಜೊತೆಗೆ ಮನೆಯಲ್ಲಿ ಅಡಕೆ ಕೊಯ್ಲಿನ ಸಂದರ್ಭದಲ್ಲಿ ತಮ್ಮ ಮನೆ ಅಡಕೆಗೊನೆ ಸ್ವತಃ ಇಳಿಸುತ್ತಿರುವ ವಿಡಿಯೋ ಕೂಡ ಸಾಕಷ್ಟು ಸದ್ದು ಮಾಡಿತ್ತು.
ಈ ಹಿಂದೆಯೂ ಸಹ ವಿಧಾನಸಭಾ ಅಧಿವೇಶನ ಹೊರತು ಹಲವಾರು ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರು, ಅಭಿಮಾನಿಗಳ ಜೊತೆ ಬೆರೆತು ಸರಳತೆ ಮೆರೆದಿದ್ದರು.೬ ಬಾರಿ ಶಾಸಕರಾಗಿ ಮಂತ್ರಿಯಾಗಿ ಕೆಲಸ ಮಾಡಿರುವ ಕಾಗೇರಿ, ಈ ಹಿಂದೆ ಶಿಕ್ಷಣ ಸಚಿವರಾಗಿ ಕೆಲಸ ಮಾಡುವಾಗ ತಮ್ಮ ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಮಾದರಿಯಾಗಿದ್ದರು.