ಹೊಸದಿಗಂತ ವರದಿ, ಗದಗ:
ನಾವು ಈ ಹಿಂದೆ ಆರೋಪ ಮಾಡಿರುವ ಪ್ರಕಾರ ಈಗ ತನಿಖೆ ನಡೆಸಿದ್ದೇವೆ. ಅವರಿಗೆ ಭಯ ಏಕೆ, ತನಿಖೆಯನ್ನು ವಿರೋಧ ಪಕ್ಷಗಳು ಸ್ವಾಗತಿಸಬೇಕು ಎಂದು ಸಚಿವ ದಿನೇಶ ಗುಂಡೂರಾವ್ ಅವರು ಹೇಳಿದರು.
ನಗರದಲ್ಲಿ ಬಾನುವಾರ ಪತ್ರಕರ್ತರೊಂದಿಗೆ ಕೋವಿಡ್ ಸಂದರ್ಭದಲ್ಲಿ ಅಕ್ರಮ ತನಿಖೆ ಕುರಿತು ಆಯೋಗ ರಚನೆ ಬಗ್ಗೆ ಮಾತನಾಡಿದ ಸಚಿವರು ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು. ಆರೋಪ ಮಾಡಿ ನಾವು ಸುಮ್ಮನಾಗುವದಿಲ್ಲ ಹಿಂದೆ ಹೇಳಿದಂತೆ ತನಿಖೆ ಮಾಡಿಸುತ್ತಿದ್ದೇವೆ. ಹಿಂದಿನ ಸರಕಾರ ಸಾರ್ವಜನಿಕ ಲೆಕ್ಕಪತ್ರ ವರದಿಯನ್ನು ಸದನಕ್ಕೆ ಒಪ್ಪಿಸಿರಲಿಲ್ಲ. ವರದಿ ಆಧಾರದಲ್ಲಿ ಹಾಗೂ ಬೇರೆ ಬೇರೆ ಮಾಹಿತಿ ಆಧಾರದ ಮೇಲೆ ತನಿಖೆ ಆಗಬೇಕು ಎಂದು ಕೋರಿದ್ದೆವು. ಈಗ ಹೈಕೋರ್ಟ್ನ ನಿವೃತ್ತಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ. ೪೦ ಪರ್ಸೆಂಟೇಜ್, ಬಿಬಿಎಂಪಿ ಹಗರಣಗಳ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ. ಇನ್ನೆರಡು ತಿಂಗಳಲ್ಲಿ ಸ್ಪಷ್ಟ ಚಿತ್ರಣ ಮುಂದಿಡುತ್ತೇನೆ ಎಂದು ಸಚಿವ ದಿನೇಶ ಗುಂಡೂರಾವ್ ಅವರು ಹೇಳಿದರು.