ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ನವೀನ್ ಮೃತದೇಹವನ್ನು ಪಡೆಯುವ ಪ್ರಯತ್ನ ಜಾರಿಯಲ್ಲಿದೆ. ನಿಖರ ಮಾಹಿತಿ ಪಡೆಯಲಾಗುತ್ತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಉಕ್ರೇನ್ ನಿಂದ ಹಲವಾರು ಕನ್ನಡಿಗರನ್ನು ಕರೆತರಲಾಗಿದೆ. ಖಾರ್ಕೀವ್, ಕೀವ್ ನಲ್ಲಿ ಹೊರಬರಲಾರದ ಪರಿಸ್ಥಿತಿಯೂ ಇದೆ. ಸಿಲುಕಿಕೊಂಡವರನ್ನು ಪತ್ತೆ ಹಚ್ಚಲು ರಾಯಭಾರಿ ಕಚೇರಿಯವರೂ ಕಾರ್ಯನಿರತರಾಗಿದ್ದಾರೆ. ದಾಳಿ ಕಡಿಮೆಯಾದ ಕೂಡಲೇ ಸಂಪರ್ಕ ಸಾಧಿಸಲಾಗುವುದು ಎಂದು ಹೇಳಿದ್ದಾರೆ. ನಿನ್ನೆಯೂ ಕೇಂದ್ರ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದು, ಉಕ್ರೇನ್ ರಾಯಭಾರ ಕಚೇರಿಯೊಂದಿಗೂ ಮಾತನಾಡಲಾಗಿದೆ ಎಂದರು.
ಕೇಂದ್ರ ಜಲಶಕ್ತಿ ಸಚಿವರು ಭಾಗವಹಿಸುವ ಜಲಜೀವನ್ ಮಿಷನ್ ಕುರಿತು ದಕ್ಷಿಣ ರಾಜ್ಯಗಳ ಪ್ರಾದೇಶಿಕ ಸಭೆಯಲ್ಲಿ ಭಾಗವಹಿಸಿ ನಂತರ ಶಿಕಾರಿಪುರದಲ್ಲಿ ರೈತರ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ರಾಣಿಬೆನ್ನೂರಿನಲ್ಲಿ ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಅವರ ತಂದೆಯವರನ್ನು ಭೇಟಿಯಾಗಲಿದ್ದೇನೆ ಎಂದರು. ಸರಕಾರದಿಂದ ನವೀನ್ ಕುಟುಂಬಕ್ಕೆ ಪರಿಹಾರ ಕೊಡಲು ನಿರ್ಧರಿಸಲಾಗಿದೆ ಎಂದು ಸಿಎಂ ತಿಳಿಸಿದರು.