ಹೊಸದಿಗಂತ ಡಿಜಿಟಲ್ ಡೆಸ್ಕ್:
ಕತಾರ್ನಲ್ಲಿ ನವೆಂಬರ್ 20ರಂದು ನಡೆದ ಫುಟ್ಬಾಲ್ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ವಿವಾದಿತ ಮುಸ್ಲಿಂ ಧರ್ಮಗುರು ಜಾಕೀರ್ ನಾಯ್ಕ್ ಪಾಲ್ಗೊಂಡಿದ್ದ ವಿಡಿಯೊವೊಂ ಏಳೇಳ್ದೆ ವೈರಲ್ ಆಗಿದ್ದು, ಇದರಿಂದ ಭಾರತದಲ್ಲಿ ಹಲವು ಟೀಕೆಗಳು ವ್ಯಕ್ತವಾಗಿತ್ತು.
ಭಾರತದಲ್ಲಿ ‘ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ಬಹಿಷ್ಕರಿಸಿ’ ಎಂಬ ಅಭಿಯಾನವೇ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿತ್ತು.
ಈ ಸುದ್ದಿ ತಿಳಿಯುತ್ತಿದ್ದಂತೆ ಕತಾರ್ ಆಡಳಿತ ಸ್ಪಷ್ಟನೆ ನೀಡಿದೆ. ‘ಫಿಫಾ ವರ್ಲ್ಡ್ಕಪ್ ಉದ್ಘಾಟನಾ ಸಮಾರಂಭಕ್ಕೆ ನಾವು ಜಾಕೀರ್ ನಾಯ್ಕ್ನನ್ನು ಆಹ್ವಾನಿಸಿರಲಿಲ್ಲ’ ಎಂದು ಭಾರತಕ್ಕೆ ತಿಳಿಸಿದೆ. ಅಷ್ಟೇ ಅಲ್ಲ, ‘ಕತಾರ್-ಭಾರತದ ದ್ವಿಪಕ್ಷೀಯ ಸಂಬಂಧವನ್ನು ಹಾಳುಗೆಡವಲು ಯಾವುದೋ ಅನ್ಯದೇಶಗಳು ಮಾಡಿದ ಕುತಂತ್ರ ಇದು. ಬೇಕೆಂತಲೇ ತಪ್ಪು ಮಾಹಿತಿಗಳನ್ನು ಹಬ್ಬಿಸಲಾಗುತ್ತಿದೆ’ ಎಂದೂ ಹೇಳಿದೆ.
ಕತಾರ್ ಈ ಬಗ್ಗೆ ಭಾರತಕ್ಕೆ ರಾಜತಾಂತ್ರಿಕ ಸಂದೇಶವನ್ನು ನೀಡಿದೆ. ಜಾಕೀರ್ ನಾಯ್ಕ್ ಬಹುಶಃ ಖಾಸಗಿಯಾಗಿ ಫಿಫಾ ವರ್ಲ್ಡ್ಕಪ್ಗೆ ಭೇಟಿ ಕೊಟ್ಟಿದ್ದಿರಬಹುದು’ ಎಂದೂ ಹೇಳಿಕೊಂಡಿದೆ.
2016ರಿಂದಲೂ ವಿವಿಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಜಾಕಿರ್ ನಾಯ್ಕ್ ಮಲೇಷ್ಯಾಕ್ಕೆ ಹೋಗಿ ನೆಲೆಸಿದ್ದಾನೆ. ಅಲ್ಲಿದ್ದರೂ ಆತ ತನ್ನ ಪ್ರವಚನ, ಭಾಷಣವನ್ನು ವಿಡಿಯೊ ಮಾಡಿ, ಭಾರತ ಮುಸ್ಲಿಮರಿಗೂ ಕಳಿಸುತ್ತಾನೆ ಎಂಬ ಮಾಹಿತಿ ಇದೆ.
ಈತ ಸ್ಥಾಪಿಸಿದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್ಎಫ್) ಒಂದು ಕಾನೂನು ಬಾಹಿರ ಸಂಘಟನೆ ಎಂದು ಇದೇ ವರ್ಷ ಮಾರ್ಚ್ನಲ್ಲಿ ಕೇಂದ್ರ ಗೃಹ ಇಲಾಖೆ ಘೋಷಿಸಿತ್ತು. ಕಾನೂನುಬಾಹಿರ ಚಟುವಟಿಕೆ ನಿಯಂತ್ರ ಕಾಯ್ದೆ (UAPA)ಯಡಿ ಪ್ರಕರಣವನ್ನೂ ದಾಖಲಿಸಿದೆ.