ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಖರಾದಲ್ಲಿ ಭಾನುವಾರ ಸಂಭವಿಸಿದ ವಿಮಾನ ಅಪಘಾತದ ಸ್ಥಳದಿಂದ ಯಾರನ್ನೂ ಜೀವಂತವಾಗಿ ರಕ್ಷಿಸಲಾಗಿಲ್ಲ ಎಂದು ನೇಪಾಳ ಸೇನೆ ವಿಷಾದ ವ್ಯಕ್ತಪಡಿಸಿದೆ. ಕ್ಷಮಿಸಿ, ನಮ್ಮಿಂದ ಒಂದು ಜೀವವನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಸಹಾಯಕ ಸ್ಥಿತಿಯಲ್ಲಿ ಪ್ರತಿಕ್ರಿಯಿಸಿದರು.
“ನಾವು ಅಪಘಾತದ ಸ್ಥಳದಿಂದ ಯಾರನ್ನೂ ಜೀವಂತವಾಗಿ ರಕ್ಷಿಸಿಲ್ಲ” ಎಂದು ನೇಪಾಳ ಸೇನಾ ವಕ್ತಾರ ಕೃಷ್ಣ ಪ್ರಸಾದ್ ಭಂಡಾರಿ ಬೇಸರವಾಗಿ ನುಡಿದಿದ್ದಾರೆ. ನೇಪಾಳದ ಪೊಖರಾದಲ್ಲಿ ಹೊಸದಾಗಿ ತೆರೆಯಲಾದ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಯೇತಿ ಏರ್ಲೈನ್ಸ್ ಪ್ರಯಾಣಿಕ ವಿಮಾನವು ನದಿಯ ಕಮರಿಗೆ ಉರುಳಿ ಪತನಗೊಂಡಿದೆ. ಮೃತದೇಹದ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯು ಇಂದು ಮುಂಜಾನೆಯೇ ಪುನರಾರಂಭಗೊಂಡಿರುವುದಾಗಿ ತಿಳಿಸಿದರು.
ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಭಾನುವಾರದಂದು ಪೋಖರಾದಲ್ಲಿ ವಿಮಾನ ಅಪಘಾತದ ನಂತರ ತುರ್ತು ಕ್ಯಾಬಿನೆಟ್ ಸಭೆಯನ್ನು ಕರೆದು ಗೃಹ ಸಚಿವಾಲಯ, ಭದ್ರತಾ ಸಿಬ್ಬಂದಿ ಮತ್ತು ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ನೇಪಾಳಿ ರಾಜಧಾನಿ ಕಠ್ಮಂಡುವಿನಿಂದ ಪೊಖರಾಗೆ ತೆರಳುತ್ತಿದ್ದಾಗ ಅವಳಿ ಎಂಜಿನ್ ಟರ್ಬೊಪ್ರಾಪ್ ಎಟಿಆರ್ 72 ವಿಮಾನ ಪತನಗೊಂಡಿದೆ. ಅಪಘಾತದ ಕಾರಣಗಳನ್ನು ತನಿಖೆ ಮಾಡಲು ನೇಪಾಳದ ಅಧಿಕಾರಿಗಳು ವಿಶೇಷ ಆಯೋಗವನ್ನು ನಿಯೋಜಿಸಿದ್ದಾರೆ. 45 ದಿನಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ.
ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರವು 68 ಪ್ರಯಾಣಿಕರನ್ನು ಹೊತ್ತೊಯ್ಯುವ ವಿಮಾನದಲ್ಲಿ ಐವರು ಭಾರತೀಯರು, ನಾಲ್ವರು ರಷ್ಯನ್ನರು ಮತ್ತು ಒಬ್ಬ ಐರಿಶ್ ಪ್ರಜೆ ಸೇರಿದ್ದಾರೆ ಎಂದು ಹೇಳಿದೆ.
“ನೇಪಾಳಿ ಸೇನೆ, ಪೊಲೀಸ್ ಪಡೆ, ಏರ್ಪೋರ್ಟ್ ಪಾರುಗಾಣಿಕಾ, ಮತ್ತು ಅಗ್ನಿಶಾಮಕ ಮತ್ತು ನೇಪಾಳ ಪೊಲೀಸರಿಗೆ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ತಿಳಿಸಲಾಗುವುದು. ವಿಮಾನದಲ್ಲಿ ಒಟ್ಟು 72ಮಂದಿಯಿದ್ದು, 68ಸಾವಾಗಿದೆ ಎಂದು ಹೇಳಿಕೆ ತಿಳಿಸಿದೆ.