ಹೊಸದಿಗಂತ ವರದಿ,ಕಾರವಾರ:
ಕರಾವಳಿ ತಟರಕ್ಷಣಾ ಪಡೆಯ ಶಕ್ತಿ ಹೆಚ್ಚಿಸಲು ಭಾರತ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಕರಾವಳಿ ಸುರಕ್ಷತೆಗಾಗಿ ತಂತ್ರಜ್ಞಾನಕ್ಕೆ ಮಹತ್ವ ನೀಡಲಾಗುತ್ತಿದೆ ಎಂದು ಭಾರತೀಯ ತಟರಕ್ಷಣಾ ಪಡೆಯ ಪಶ್ಚಿಮ ವಲಯ ಕಮಾಂಡರ್ ಮನೋಜ ಬಾಡ್ಕರ್ ತಿಳಿಸಿದರು.
ಕಾರವಾರದ ಕೋಸ್ಟ್ ಗಾರ್ಡ್ ಕಚೇರಿಗೆ ಭೇಟಿ ನೀಡಿದ ಅವರು ಸಮುದ್ರದಲ್ಲಿ ಭದ್ರತೆ ಹೆಚ್ಚಿಸುವುದು ಕೋಸ್ಟ್ ಗಾರ್ಡ್ ನ ಪ್ರಮುಖ ಕೆಲಸವಾಗಿದ್ದು ಪ್ರತಿ 30 ನಾಟಿಕಲ್ ಮೈಲಿನಲ್ಲಿ ರೆಡಾರ್ ಜೊತೆ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ.
ಅಂಕೋಲಾ ತಾಲೂಕಿನ ಬೆಲೇಕೇರಿ ವ್ಯಾಪ್ತಿಯ ಕಡಲ ಪರಿಸರದಲ್ಲಿ ರೆಡಾರ್ ತಂತ್ರಜ್ಞಾನ ಅಳವಡಿಸಲಾಗುವುದು ಎಂದು ತಿಳಿಸಿದರು.
ಕಾರವಾರದ ಕಡಲ ತೀರದಲ್ಲಿ ಕೋಸ್ಟ್ ಗಾರ್ಡ್ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಯೋಜನೆಯಿದ್ದು ಸ್ಥಳೀಯರ ಮತ್ತು ಮೀನುಗಾರರ ವಿರೋಧ ಇದೆ ಅವರ ಮನವೊಲಿಸುವ ಪ್ರಯತ್ನ ಮಾಡಿ ಮೀನುಗಾರರ ವಿರೋಧ ಇಲ್ಲದಿದ್ದರೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಲಾಗುವುದು ಎಂದ ಅವರು ಅಮದಳ್ಳಿ ಬಳಿ 26 ಎಕರೆ ಜಮೀನು ಖರೀದಿಸಲಾಗಿದ್ದು ವಸತಿ ಸಮುಚ್ಚಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಹಿಂದಿನಿಂದಲೂ ಆಗಾಗ ಸ್ಯಾಟಲೈಟ್ ಪೋನ್ ಸಕ್ರಿಯವಾಗಿರುವುದು ಕಂಡು ಬರುತ್ತಿದ್ದು ವಿದೇಶಗಳಿಂದ ಬರುವ ಹಡಗುಗಳಲ್ಲಿ ಮಾಹಿತಿಯ ಕೊರತೆಯಿಂದ ಉಪಯೋಗಿಸುವ ಸಾಧ್ಯತೆ ಹೆಚ್ಚಿದೆ ಇದು ಸ್ಥಳೀಯ ಪೊಲೀಸರಿಗೆ, ಗುಪ್ತಚರ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.