ಹೊಸದಿಗಂತ ವರದಿ,ಬಳ್ಳಾರಿ:
ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರು ತಾಕತ್ತು, ಧಮ್ ಬಗ್ಗೆ ಮಾತಾಡ್ತಾರೆ, ಎಸ್ಸಿ ಹಾಗೂ ಎಸ್ಟಿ ಅವರಿಗೆ ಮಿಸಲಾತಿ ಹೆಚ್ಚಿಸುವ ಮೂಲಕ ನಮ್ಮ ತಾಕತ್ತು ತೋರಿಸಿದ್ದೇವೆ, ಎರಡೂ ವರ್ಗದವರಿಗೆ ನಿಮ್ಮ ಕೊಡುಗೆ ಏನು ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಪ್ರಶ್ನಿಸಿದರು.
ನಗರದಲ್ಲಿ ನಂ.20 ರಂದು ಹಮ್ಮಿಕೊಂಡಿರುವ ಪರಿಶಿಷ್ಟ ಪಂಗಡ ಜನಶಕ್ತಿ ರಾಜ್ಯಮಟ್ಟದ ಬೃಹತ್ ಸಮಾವೇಶದ ಸ್ಥಳದ ಬಳಿ ಶುಕ್ರವಾರ ಮಾತನಾಡಿದರು. ಸ್ವಾತಂತ್ರ್ಯ ಬಂದಾಗಿನಿಂದಲೂ ಹೆಚ್ಚು ಅವಧಿ ಆಡಳಿತ ನಡೆಸಿದ ಕಾಂಗ್ರೆಸ್ ಎಸ್ಸಿ ಹಾಗೂ ಎಸ್ಟಿ ವರ್ಗದವರ ಬಗ್ಗೆ ಕಿಂಚಿತ್ತು, ಆಲೋಚಿಸಿಲ್ಲ, ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ, ಕೇವಲ ಅವರನ್ನು ಚುನಾವಣೆ ಬಂದಾಗ ಮತ ಪಡೆಯಲು ಮಾತ್ರ ಬಳಸಿಕೊಂಡರು ಹೊರತು ಅವರಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸಲಿಲ್ಲ, ಮಿಸಲಾತಿ ಕುರಿತು ಮನವಿ ಮಾಡಿದರೇ ಕಾಲಹರಣ ಮಾಡಿದರು ಹೊರತು ಮಿಸಲಾತಿ ಹೆಚ್ಚಳ ಮಾಡುವಲ್ಲಿ ಶ್ರಮಿಸಲಿಲ್ಲ, ಅದನ್ನು ನಮ್ಮ ಬಿಜೆಪಿ ಸರ್ಕಾರ ಮಾಡುವ ಮೂಲಕ ದಾಖಲೆ ಸೃಷ್ಟಿಸಿದೆ, ಎಸ್ಟಿ ಅವರಿಗೆ 3 ರಿಂದ 7 ಕ್ಕೆ ಹಾಗೂ ಎಸ್ಸಿಅವರಿಗೆ 15 ರಿಂದ 17ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ನಮ್ಮ ಬಿಜೆಪಿ ಸರ್ಕಾರ ಇತಿಹಾಸ ಸೃಷ್ಟಿಸಿದೆ. ಇದನ್ನೇ ಕಾಂಗ್ರೆಸ್ ನವರು ನಮ್ಮವಿರುದ್ಧ, ಅದರಲ್ಲೂ ನಮ್ಮವಿರುದ್ಧ ಮನಬಂದಂತೆ ಮಾತನಾಡಿ, ಗೇಲಿ ಮಾಡಿದರು. ಎರಡೂ ವರ್ಗಕ್ಕೆ ಮೀಸಲಾತಿ ಹೆಚ್ಚಿಸುವ ಮೂಲಕ ತಕ್ಕ ಉತ್ತರ ನೀಡಿದ್ದೇವೆ, ನಮ್ಮ ಧಮ್ ಬಗ್ಗೆ ಮಾತನಾಡುವ ಕಾಂಗ್ರೆಸ್ ನವರಿಗೆ ನಾಚಿಕೆಯಾಗಬೇಕು, ಅಹಿಂದ ಹೆಸರಿನಲ್ಲಿ ರಾಜಕಾರಣ ಮಾಡುವ ಸಿದ್ದರಾಮಯ್ಯ ಅವರಿಂದ ಯಾವುದೇ ಕೊಡುಗೆ ಶೂನ್ಯ, ಕಾಂಗ್ರೆಸ್ ಕಪಟ ರಾಜಕಾರಣ ಮಾಡುತ್ತಿದೆ, ಅವರ ಸಾಧನೆ ಶೂನ್ಯ ಎಂದರು.
ಸಿದ್ದರಾಮಯ್ಯ ನಾವು ದೋಸ್ತರು, ಅವರ ಬಗ್ಗೆ ಹೆಚ್ಚು ಮಾತನಾಡೋಲ್ಲ, ಚಾಮುಂಡೇಶ್ವರಿ ಕ್ಷೇತ್ರದ ಜನರು ಸೊಲಿನ ಬಿಸಿಮುಟ್ಟಿಸಿದರು, ಬದಾಮಿ ಬನಶಂಕರಿ ತಾಯಿ ಸಿದ್ದರಾಮಯ್ಯ ಅವರನ್ನು ಕೈ ಹಿಡಿದರು, ಈಗ ಮತ್ತೆ ಬದಾಮಿ ಜನರಿಗೆ ಮೋಸ ಮಾಡಿ ಕೋಲಾರ ಕಡೆ ಮುಖ ಮಾಡಿದ್ದಾರೆ, ಜನತೆ ಅಲ್ಲಿಯೂ ತಕ್ಕ ಪಾಠ ಕಲಿಸ್ತಾರೆ, ಬಿಜೆಪಿ ವರೀಷ್ಠರು ಎಲ್ಲಿ ಸೂಚಿಸ್ತಾರೋ ಅಲ್ಲಿಯೇ ಈ ಬಾರಿ ಸ್ಪರ್ಧಿಸುವೆ, ವರೀಷ್ಠರ ತೀರ್ಮಾನವೇ ಅಂತಿಮ ಎಂದರು.