ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯಕ್ಕೆ ಯಾರು ಕೈ ಹಾಕಬಾರದು. ನ್ಯಾಯಾಲಯ, ಸರಕಾರದ ಮೇಲೆ ಒತ್ತಡ ಹೇರಿ, ಕಾನೂನು ನ್ಯಾಯ ತೀರ್ಮಾನವನ್ನು ಪ್ರಜೆಗಳು ಕೈಗೆತ್ತಿಕೊಳ್ಳಬಾರದು, ಸಮಾಜದಲ್ಲಿ ಒಂದು ಬಾರಿ ಅಶಾಂತಿ ಸೃಷ್ಟಿಯಾದರೆ ಅದಕ್ಕೆ ಕೊನೆಯಿಲ್ಲ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ಹೇಳಿದರು.
ಶಿವಮೊಗ್ಗ ಗಲಭೆ ಕುರಿತಾಗಿ ಸೋಮವಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಪೊಲೀಸರ ಮೇಲೆ ಹಲ್ಲೆಯಾದರೆ ಸರಕಾರ ಏನು ಮಾಡುತ್ತಿದೆ. ಪೊಲೀಸರ ಮೇಲೆ ಕಲ್ಲೆಸೆಯುತ್ತಿದ್ದಾರೆ. ಅಂದರೆ ಭಯ ಇಲ್ಲ ಅಂತ ಆಯ್ತು. ಕಾನೂನು ಮೀರಿದವರಿಗೆ ಶಿಕ್ಷೆ ಏನು ಅಂತ ಅರ್ಥಮಾಡಿಸಬೇಕಾಗಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡಬೇಕು. ಮೂರು ಅಂಗಗಳ ಕಾರ್ಯನಿರ್ವಹಣೆ ಸಾಲುತ್ತಿಲ್ಲ ಎಂಬೂದು ಇಂತಹ ಘಟನೆಯಿಂದ ತಿಳಿಯುತ್ತಿದೆ ಎಂದರು.
ಕಾವೇರಿ ನದಿ ನೀರು ಹಂಚಿಕೆ ವಿವಾದ
ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ಬದ್ಧವಾಗಿರುವುದು ಅಗತ್ಯವಾಗಿದ್ದು, ಕೋರ್ಟ್ ಆದೇಶವನ್ನು ಮೀರಿ ಹೋಗಲು ಸಾಧ್ಯವಿಲ್ಲ. ಹೋರಾಟಗಳು ಜನಾಭಿಪ್ರಾಯವನ್ನು ರೂಪಿಸುತ್ತದೆ ನಿಜ, ಸಮರ್ಪಕವಾದ ವಾದ ಮಂಡಿಸಿ, ವಸ್ತು ಸ್ಥಿತಿಯನ್ನು ಕೋರ್ಟ್ ಗೆ ವಿವರಿಸಬೇಕು. ನ್ಯಾಯಾಲಯದ ಮೇಲೆ ಪ್ರಭಾವ ಬೀಳುವುದಾದರೆ ಪ್ರತಿಭಟನೆಗಳು ಬೇಕು, ಕುಡಿಯಲು ನೀರು ಮೊದಲು, ಬೆಳೆಗೆ ಆಮೇಲೆ. ಈ ವಾದವನ್ನು ಕೋರ್ಟ್ ನಲ್ಲಿ ಸಮರ್ಥವಾಗಿ ಮಂಡಿಸಬೇಕಾಗುತ್ತದೆ ಎಂದವರು ತಿಳಿಸಿದರು.