ಹೊಸದಿಗಂತ ಡಿಜಿಟಲ್ ಡೆಸ್ಕ್
ಯಾರು ರಾಜಕಾಲುವೆ ಒತ್ತುವರಿ ಮಾಡಿದ್ದಾರೆ. ಸಹಜ ಕಾಲುವೆಗೆ ಯಾರೇ ಅಡ್ಡಿ ಬಂದರೂ ತೆರವು ಸೂಚನೆ ನೀಡಿದ್ದೇವೆ. ಅದರಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ಮಹದೇವಪುರ ವಲಯದ ರೈನ್ ಬೋ ಡ್ರೈವ್, ಇಕೋ ಸ್ಪೇಸ್, ಅನುಗ್ರಹ ಲೇಔಟ್, ಸಾಯಿಲೇಔಟ್ ಸೇರಿದಂತೆ ಇನ್ನಿತರೆ ಕಡೆ ಇಂದಿನಿಂದ ದೊಡ್ಡ ಮಟ್ಟದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಎಲ್ಲರಿಗೂ ಕೂಡ ಮಳೆಯಿಂದ ತೊಂದರೆ ಆಗಿದೆ. ತೆರವು ಮಾಡುವುದು ಪ್ರಾರಂಭ ಆಗಿದೆ. ಅದು ನಿಲ್ಲುವುದಿಲ್ಲ ಎಂದು ಖಡಕ್ ಆಗಿ ಹೇಳಿದರು.
ಕಳೆದೆರೆಡು ದಿನಗಳಿಂದ ಮಳೆರಾಯ ಸ್ವಲ್ಪ ಬಿಡುವು ಕೊಟ್ಟಿದ್ದಾನೆ. ಕಳೆದ ವಾರದಲ್ಲಿ ಸುರಿದ ಮಳೆಗೆ ಇಡೀ ಬೆಂಗಳೂರೇ ನಲುಗಿ ಹೋಗಿತ್ತು. ಇದೀಗ ಮಳೆ ಕಡಿಮಾಯಾಗುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇನ್ನು ಹಲವಾರು ಪ್ರಕರಣ ಈಗಾಗಲೇ ಕೋರ್ಟ್ ನಲ್ಲಿ ಇವೆ. ಕೋರ್ಟ್ ಕೂಡ ಒತ್ತುವರಿ ತೆರವು ಮಾಡಿ ಅಂತಲೇ ಸೂಚನೆ ನೀಡಿದೆ. ಈ ಬಾರಿ ನಾವು ನಿಲ್ಲಿಸೋದಿಲ್ಲ, ತೆರವು ಮಾಡಿಯೇ ಮಾಡ್ತೇವೆ ಹೇಳಿದರು.
ಮಳೆಯಿಂದಾಗಿ ಐಟಿ-ಬಿಟಿಯವರಿಗೂ ತೊಂದರೆ ಆಗಿದೆ. ರಸ್ತೆಯಲ್ಲಿ ಓಡಾಡುವವರಿಗೂ ತೊಂದರೆ ಆಗಿದೆ. ಸಾಮಾನ್ಯರಿಗೂ ತೊಂದರೆ ಆಗಿದೆ. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಚರಣೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.