ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಚುನಾವಣೆ ಸಮೀಪಿಸುತ್ತಿದ್ದಂತೆ ಕಣದಲ್ಲಿ ಭರ್ಜರಿ ಪ್ರಚಾರಾಂದೋಲನಗಳೂ ನಡೆಯುತ್ತಿವೆ. ಪರಿಶಿಷ್ಟ ಪಂಗಡದವರು ಗುಜರಾತ್ ಕ್ಷೇತ್ರದಲ್ಲಿ ಪ್ರಬಲರಾಗಿದ್ದಾರೆ. ಹೀಗಾಗಿ ಈ ಮತಗಳನ್ನು ಸೆಳೆಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಸತೊಂದು ಚರ್ಚೆಯನ್ನು ಹುಟ್ಟುಹಾಕಿದ್ದು ಬಿಜೆಪಿಯವರು “ಎಸ್ಟಿ ಸಮುದಾಯಕ್ಕೆ ಸೇರಿದವರನ್ನು ಆದಿವಾಸಿಗಳು ಎಂದು ಕರೆಯುವುದಿಲ್ಲ. ಬದಲಾಗಿ ವನವಾಸಿಗಳು ಎಂದು ಕರೆಯುತ್ತಾರೆ. ಇದರರ್ಥ ನೀವು ಇಲ್ಲಿನ ಮೂಲ ನಿವಾಸಿಗಳು ಎಂಬುದನ್ನು ಒಪ್ಪಿಕೊಳ್ಳಲು ಅವರು ತಯಾರಿಲ್ಲ. ನಿಮ್ಮನ್ನು ಕಾಡಿನಲ್ಲಿ ವಾಸಿಸುವವರು ಎನ್ನುತ್ತಾರೆ. ನೀವು ಸಾಮಾಜಿಕವಾಗಿ ಮುನ್ನೆಲೆಗೆ ಬರುವುದು ಅವರಿಗೆ ಇಷ್ಟವಿಲ್ಲ” ಎಂದು ಆರೋಪಿಸಿದ್ದಾರೆ. ಹೀಗಾಗಿ ʼಆದಿವಾಸಿʼ ಮತ್ತು ʼವನವಾಸಿʼ ಎಂಬ ಶಬ್ದಗಳು ಈಗ ಬಹಳ ಚರ್ಚೆಯಲ್ಲಿದೆ.
ಭಾರತದ ಸಂವಿಧಾನದಲ್ಲಿ ಈ ಶಬ್ದವನ್ನು ʼಅನುಸೂಚಿತ ಜನಜಾತಿʼ ಎಂದು ಬಳಸಲಾಗಿದೆ. ಆದಿವಾಸಿ ಎಂಬ ಶಬ್ದವು ಮೊದಲಿನಿಂದಲೂ ಇದ್ದವರು ಅಥವಾ ಮೂಲನಿವಾಸಿ ಎಂಬರ್ಥವನ್ನು ಕೊಡುತ್ತದೆ.
ಹಾಗಿದ್ದರೆ ಬಿಜೆಪಿಯೇಕೆ ಈ ಶಬ್ದವನ್ನು ಬಳಸುವುದಿಲ್ಲ ಎಂಬುದಕ್ಕೆ ಈ ಹಿಂದೆ ರಾಮ ಮಾಧವ್ ಅವರು ನೀಡಿದ್ದ ಉತ್ತರವೊಂದು ಪ್ರಸ್ತುತವಾಗುತ್ತದೆ. ” ನಾವು ಅವರನ್ನು ವನವಾಸಿಗಳು ಎಂದು ಕರೆಯುತ್ತೇವೆ. ನಾವು ಅವರನ್ನು ಆದಿವಾಸಿಗಳು ಎಂದು ಕರೆಯುವುದಿಲ್ಲ ಏಕೆಂದರೆ ಆದಿವಾಸಿ ಎಂದರೆ ಮೂಲ ನಿವಾಸಿಗಳು, ಇತರರೆಲ್ಲರೂ ಹೊರಗಿನಿಂದ ಬಂದವರು ಎಂಬ ಅರ್ಥ ಕೊಡುತ್ತದೆ. ಆದರೆ ನಾವೆಲ್ಲರೂ ಈ ಖಂಡದ ಮೂಲ ನಿವಾಸಿಗಳು ಎಂದು ಸಂಘ, ಬಿಜೆಪಿ ನಂಬುತ್ತದೆ ಹಾಗಾಗಿಯೇ ಅವರನ್ನು ವನವಾಸಿಗಳು ಎಂದು ಕರೆಯಲಾಗುತ್ತದೆ”
“ಇದಲ್ಲದೇ ಆದಿವಾಸಿ ಅನ್ನುವ ಶಬ್ದವು ಆರ್ಯನ್ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡು 1930ರಲ್ಲಿ ಬ್ರಿಟೀಷರು ಬಳಸಿದ್ದು ಆರ್ಯನ್ ಸಿದ್ಧಾಂತದ ಪ್ರಕಾರ ಆರ್ಯರು ಮಧ್ಯ ಏಷ್ಯಾದ ಕಡೆಯಿಂದ ಬಂದವರು ಎನ್ನುತ್ತದೆ. ಆದರೆ ಆರ್ಯ ಆಕ್ರಮಣ ಸಿದ್ಧಾಂತವೇ ಸುಳ್ಳು ಎಂಬುದು ಸಾಬೀತಾಗಿದೆ. ಎಲ್ಲರೂ ಇಲ್ಲಿನ ಮೂಲನಿವಾಸಿಗಳು ಎಂಬುದು ಮೊದಲಿನಿಂದಲೂ ನಮ್ಮ ಪ್ರತಿಪಾದನೆಯಾಗಿರುವುದರಿಂದ ವನವಾಸಿ ಶಬ್ದವನ್ನು ಬಳಸಲಾಗುತ್ತೆ”