-ದುಗ್ಗಳ ಸದಾನಂದ
ಕರೆಂಟ್ ಕೈಕೊಟ್ಟಾಗ ಬೆಚ್ಚಗೆ ಮನೆಯಲ್ಲಿ ಕೂತು ಹಿಡಿ ಶಾಪ ಹಾಕುತ್ತಿರುವ ಸಾರ್ವಜನಿಕರು ಒಂದು ಕಡೆಯಾದರೆ, ಮಳೆ ಗಾಳಿಯನ್ನು ಲೆಕ್ಕಿಸದೆ ನಮ್ಮ ಜೀವವನ್ನು ಪಣಕಿಟ್ಟು ದುಡಿಯುವ ವಿದ್ಯುತ್ ನಿಗಮದ ಸಿಬ್ಬಂದಿ ಇನ್ನೊಂದೆಡೆ…ಹೌದು, ಇಂತಹ ದೃಶ್ಯ ಕಂಡು ಬಂದಿದ್ದು, ಕೊಡಗು ಜಿಲ್ಲೆಯ ನಾಪೋಕ್ಲುನಲ್ಲಿ.
ನಾಲ್ಕು ನಾಡು ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ನಿರಂತರ ವರುಣನ ಅಬ್ಬರ ಮುಂದುವರೆದಿದೆ. ಪ್ರತಿದಿನ ಸರಾಸರಿ ಮೂರರಿಂದ ನಾಲ್ಕು ಇಂಚು ಮಳೆಯಾಗುತ್ತಿದ್ದು, ಅಲ್ಲಲ್ಲಿ ವಿದ್ಯುತ್ ಕಂಬಗಳ ಮೇಲೆ ಮರ ಉರುಳಿಬಿದ್ದು ವಿದ್ಯುತ್ ಪೂರೈಕೆ ಮೊಟಕುಗೊಂಡು ಸಾರ್ವಜನಿಕರಿಗೆ ತೀವ್ರವಾಗಿ ಕಾಡತೊಡಗಿದೆ.
ಭೀಕರ ಮಳೆ ಗಾಳಿಯಿಂದಾಗಿ ಮರ ಗಿಡಗಳು ವಿದ್ಯುತ್ ಲೈನ್ಗಳ ಮೇಲೆ ಬಿದ್ದು ಸಮಸ್ಯೆ ಉಂಟಾದರೆ ಇನ್ನೊಂದು ಕಡೆ ಕಾವೇರಿ ಪ್ರವಾಹದಿಂದಾಗಿ ವಿದ್ಯುತ್ ಲೈನ್ ಪ್ರವಾಹದಲ್ಲಿ ಮುಳುಗಡೆಯಾಗುತ್ತಿದೆ. ಆದರೆ ಈ ಎಲ್ಲಾ ಸಮಸ್ಯೆಗೆ ಎದೆಗುಂದದೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಭಿಯಂತರ ಹರೀಶ್ ಎಚ್.ಆರ್. ಮುಂದಾಳತ್ವದಲ್ಲಿ ತಮ್ಮ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ಅವಿರತಾ ಶ್ರಮವಹಿಸುತ್ತಿದ್ದಾರೆ. ಇವರ ಈ ಶ್ರಮಕ್ಕೆ ನಾವೆಲ್ಲರೂ ಸಲ್ಯೂಟ್ ಹೊಡೆಯಲೇಬೇಕು ಅಲ್ಲವೇ?