ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನೆ ತುಳಿತಕ್ಕೊಳಗಾಗಿ ಆರು ವರ್ಷದ ಮಗು ಸೇರಿ ಇಬ್ಬರು ಸಾವನ್ನಪಪಿರುವ ದಾರುಣ ಘಟನೆ ಛತ್ತೀಸ್ಘಡದ ಕೊರಿಯಾ ಜಿಲ್ಲೆಯ ಬೆಳಗಾವಿ ಗ್ರಾಮದಲ್ಲಿ ನಡೆದಿದೆ. ಮಣೇಂದ್ರಗಢ ಅರಣ್ಯ ವ್ಯಾಪ್ತಿಗೆ ಒಳಪಡುವ ಬೆಳಗಾವಿ ಗ್ರಾಮದಲ್ಲಿನ ಗುಲಾಬ್ ಸಿಂಗ್ ಗೊಂಡ್ ಎಂಬುವವರ ನಿರ್ಮಾಣ ಹಂತದ ಮನೆಗೆ ನುಗ್ಗಿದ ಕಾಡಾನೆ ಮನೆಯಲ್ಲಿ ಮಲಗಿದ್ದ 5ವರ್ಷದ ಮಗು ಹಾಗೂ ಗುಲಾಬ್ ಸಿಂಗ್ ಗೊಂಡ್ನನ್ನು ತುಳಿದು ಹಾಕಿದೆ ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ಲೋಕನಾಥ್ ಪಟೇಲ್ ತಿಳಿಸಿದ್ದಾರೆ. ಗೊಂಡ್ ಪತ್ನಿ ಸುನೀತಾ ಆನೆ ದಾಳಿಯಿಂದ ಬದುಕುಳಿದಿದ್ದು, ಮನೆ ಸಂಪೂರ್ಣ ನಾಶವಾಗಿದೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಗಜರಾಜನನ್ನು ಅಲ್ಲಿಂದ ಹೊರ ಹಾಕಿದ್ದಾರೆ.
ಮಧ್ಯಪ್ರದೇಶ ಪ್ರದೇಶದಿಂದ ಆನೆಗಳ ಹಿಂಡು ಬಂದಿದ್ದು, ಈವಿಚಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದ್ದಾರೆ. 10 ಆನೆಗಳ ಗುಂಪು ನಿಮ್ಮ ಪ್ರದೇಶಕ್ಕೆ ಬರುತ್ತಿದೆ ಎಂದು ಧ್ವನಿವರ್ಧಕದ ಮೂಲಕ ಗ್ರಾಮಸ್ಥರಿಗೆ ತಿಳಿಸಲಾಗಿದೆ, ಆದರೆ ಗೊಂಡ್ ಮನೆ ಕಾಡಿನಲ್ಲಿರುವುದರಿಂದ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿಲ್ಲ ಎಂದು ಪಟೇಲ್ ಹೇಳಿದರು.
ಆನೆ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರೂ. 25,000 ನೀಡಲಾಗಿದ್ದು, ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಉಳಿದ ಪರಿಹಾರವನ್ನು ವಿತರಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಜಶ್ಪುರ್, ಕೊರಿಯಾ, ಬಲರಾಮ್ಪುರ್, ಸೂರಜ್ಪುರ ಜಿಲ್ಲೆಗಳು ಹಾಗೂ ಬಿಲಾಸ್ಪುರ ವಿಭಾಗದ ಕೊರ್ಬಾ ಮತ್ತು ರಾಯಗಡ ಪ್ರದೇಶಗಳನ್ನು ಒಳಗೊಂಡಿರುವ ಸುರ್ಗುಜಾ ವಿಭಾಗದಲ್ಲಿ ಸ್ಥಳೀಯರು ಅನೇಕ ವರ್ಷಗಳಿಂದ ಆನೆಗಳ ಹಾವಳಿಯಿಂದ ತತ್ತರಿಸಿದ್ದಾರೆ. ಆನೆ ದಾಳಿಗೆ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದು, ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿದೆ.