ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಕಟ್ಟಡ ನೆಲಸಮ ಮಾಡಲು ಬುಲ್ಡೋಜರ್ ಬೇಡ ಓಮ್ನಿ ಬಸ್ ಕೊಂಡುಹೋಗಿ ಎಂದು ಆದೇಶಿಸಲು ಸಾಧ್ಯವೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಉತ್ತರ ಪ್ರದೇಶದ ಅಕ್ರಮ ಮನೆಗಳ ನೆಲಸಮ ವಿರುದ್ಧ ಕೆಲವು ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಸಂಘಟನೆ ಪರ ವಾದ ನಡೆಸುತ್ತಿರುವ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಅವರಿಗೆ ಈ ಪ್ರಶ್ನೆ ಕೇಳಿದೆ.
ಉತ್ತರ ಪ್ರದೇಶದಲ್ಲಿ ನಿರ್ದಿಷ್ಟ ಸಮುದಾಯದವರನ್ನು ಗುರಿಯಾಗಿಸಿಕೊಂಡು ಕಾನೂನು ಮೀರಿ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ. ಆದರೆ ಇತರ ಸಮುದಾಯದವರ ಮನೆಗಳನ್ನು ಹೆಸರಿಗೆ ಮಾತ್ರ ಎಂಬಂತೆ ನೆಲಸಮ ಮಾಡಲಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಆಗಬೇಕು ಎಂದು ದವೆ ವಾದ ಮಂಡಿಸಿದ್ದರು. ಹಿರಿಯ ನ್ಯಾಯವಾದಿಯಾಗಿದ್ದು ನಿರ್ದಿಷ್ಟ ಸಮುದಾಯ ಎಂದು ಉಲ್ಲೇಖಿಸಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಪಿ.ಎಸ್. ನರಸಿಂಹ ಅವರಿದ್ದ ಪೀಠ, ಭಾರತದಲ್ಲಿ ಭಾರತೀಯ ಸಮುದಾಯ ಮಾತ್ರವೇ ಇರುವುದು. ಅನಾವಶ್ಯಕ್ವಾಗಿ ಸಂವೇದನಾರಹಿತ ಹೇಳಿಕೆ ನೀಡುವುದು ಸರಿಯಲ್ಲ. ನಾವೇನು ಬುಲ್ಡೋಜರ್ ಬದಲು ಓಮ್ನಿ ಬಸ್ ಮೂಲಕ ಅಕ್ರಮ ಮನೆಗಳನ್ನು ನೆಲಸಮಗೊಳಿಸಿ ಎಂದು ಆದೇಶಿಸಲು ಆಗುತ್ತದೆಯೇ ಎಂದು ಪ್ರಶ್ನಿಸಿ, ವಿಚಾರಣೆಯನ್ನು ಮುಂದೂಡಿತು.