ಹೊಸದಿಗಂತ ವರದಿ,ಸುಬ್ರಹ್ಮಣ್ಯ:
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಧರ್ಮಸ್ಥಳ ಮಂಜುನಾಥ, ಕೊಲ್ಲೂರು ಮುಕಾಂಬಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ದರುಶನಕ್ಕೆ ಬಂದಿದ್ದೇನೆ.ಯಾವುದೇ ಶುಭ ಕಾರ್ಯ ಮತ್ತು ಚುನಾವಣೆಯಂತಹ ಹೋರಾಟದ ಮೊದಲು ದೇವರ ದರುಶನ ಮಾಡಿ ಆಶೀರ್ವಾದ ಪಡೆಯುವುದು ವಾಡಿಕೆ.ಅದೇ ರೀತಿ ಕುಕ್ಕೆಗೆ ಆಗಮಿಸಿ ಒಳಿತಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ.ಈ ಹಿಂದೆ ವಿಧಾನ ಸಭಾ ಚುನಾವಣೆ ಮೊದಲು ಎಲ್ಲಾ ಕ್ಷೇತ್ರಗಳಿಗೆ ತೆರಳಿ ಭಗವಂತನ ಆಶೀರ್ವಾದ ಪಡೆದಿದ್ದೆ.ಆ ಚುನಾವಣೆಯಲ್ಲಿ ಸಂಪೂರ್ಣ ಯಶಸ್ಸು ದೊರಕಿದೆ.ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬಂದು ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಬೇಕು ಎಂದು ಪ್ರಾರ್ಥಿಸಿದ್ದೇನೆ.ಈ ಬಾರಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನವನ್ನು ರಾಜ್ಯದಲ್ಲಿ ಪಡೆಯುತ್ತದೆ ಎಂಬ ವಿಶ್ವಾಸವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕುಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತನ್ನ ಅಧಮ್ಯ ವಿಶ್ವಾಸ ಹೊರ ಹಾಕಿದರು.ಈ ಹಿಂದಿನ ಚುನಾವಣೆಯಲ್ಲಿ ಜನತೆಯ ಹಿತಕ್ಕಾಗಿ ನಾವು ಘೋಷಿಸಿದ ಪಂಚ ಗ್ಯಾರಂಟಿಗಳನ್ನು ಜನತೆಗೆ ಒದಗಿಸಿ ನುಡಿದಂತೆ ನಡೆದಿದ್ದೇವೆ.ಅಲ್ಲದೆ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದೇವೆ.ಆದ್ದರಿಂದ ರಾಜ್ಯದ ಜನತೆ ಅತೀ ಹೆಚ್ಚಿನ ಆಶೀರ್ವಾದ ಮಾಡುತ್ತಾರೆ .ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿ ಕೊಡುವ ಮೂಲಕ ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ.ಈ ಮೂಲಕ ಅವರು ತೀರ್ಥ ಕ್ಷೇತ್ರದ ಯಾತ್ರೆ ಮಾಡಿ ಪಾವನವಾಗುತ್ತಿದ್ದಾರೆ ಎಂದು ನುಡಿದರು.