ಮದುವೆಯಾದ ಬಳಿಕ ಹೆಂಡತಿ ದಪ್ಪ ಆಗಿದ್ದಾಳೆ ಎಂದು ಅಮಮಾಧಾನಗೊಂಡ ಪತಿರಾಯನೊಬ್ಬ ತ್ರಿವಳಿ ತಲಾಖೆ ನೀಡಿ ವಿಚ್ಛೇದನಕ್ಕೆ ಮುಂದಾದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ. ಮೀರತ್ ನಿವಾಸಿ ನಜ್ಮಾ ಬೇಗಂ (28) ಅವರು ಮೊಹಮ್ಮದ್ ಸಲ್ಮಾನ್ ಅವರೊಂದಿಗೆ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು.
ತನ್ನ ದೇಹದ ತೂಕ ಹೆಚ್ಚಾಗಲು ಪ್ರಾರಂಭಿಸಿದಾಗ, ತನ್ನ ಪತಿ ತನ್ನನ್ನು ಗೇಲಿ ಮಾಡಿ ಹಿಂಸಿಸಿದ್ದಾನೆ. ಅಲ್ಲದೆ ದಪ್ಪಗಾದೆ ಎಂಬ ಉದ್ದೇಶಕ್ಕೆ ತನ್ನನ್ನು ಮನೆಯಿಂದ ಹೊರ ಹಾಕಿ ತಲಾಖ್ ನೀಡಿದ್ದಾನೆ ಎಂದು ಬೇಗಂ ಹೇಳಿದ್ದಾರೆ. ಮಹಿಳೆ ಕಳೆದ ಒಂದು ತಿಂಗಳಿನಿಂದ ಪೋಷಕರೊಂದಿಗೆ ವಾಸವಾಗಿದ್ದಾಳೆ.
ದಂಪತಿಗೆ ಏಳು ವರ್ಷದ ಮಗ ಇದ್ದಾನೆ. ಆಕೆಯ ದೂರಿನ ನಂತರ, ಪೊಲೀಸರು ಆರೋಪಿ ಪತಿ ಸಲ್ಮಾನ್ ವಿರುದ್ಧ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಸೆಕ್ಷನ್ 3/4 ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆಗಸ್ಟ್ 28 ರಂದು ಸಲ್ಮಾನ್ ಇತರ ಐದು ಮಂದಿಯೊಂದಿಗೆ ತನ್ನ ಪೋಷಕರ ಮನೆಗೆ ಬಂದು ತನಗೆ ಥಳಿಸಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಬಳಿಕ ಆತ ತ್ರಿವಳಿ ತಲಾಖ್ ಹೇಳಿ ಅಲ್ಲಿಂದ ತೆರಳಿದ್ದ. ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಕೊತ್ವಾಲಿ ಮೀರತ್ ವೃತ್ತದ ಅಧಿಕಾರಿ ಅರವಿಂದ್ ಕುಮಾರ್ ಚೌರಾಸಿಯಾ ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ