ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದುಗಳು ಪವಿತ್ರವೆಂದು ಪರಿಗಣಿಸುವ ಉತ್ತರಾಖಂಡದ ಕೇದಾರನಾಥ ದೇವಾಲಯದಲ್ಲಿ ಅಪವಿತ್ರ ನಡೆದಿದೆ. ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಮಹಿಳಾ ಭಕ್ತರೊಬ್ಬರು ಕರೆನ್ಸಿ ನೋಟುಗಳನ್ನು ಸುರಿದಿದ್ದಾರೆ. ಶಿವಲಿಂಗದ ಮೇಲೆ ಕರೆನ್ಸಿ ನೋಟುಗಳನ್ನು ಎರಚುತ್ತಾ ನೃತ್ಯ ಮಾಡಿದ್ದಳು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಕ್ತರು ಆಕ್ರೋಶಗೊಂಡಿದ್ದಾರೆ. ಘಟನೆ ವಿವಾದವಾಗುತ್ತಿದ್ದಂತೆ ಶ್ರೀ ಬದರಿನಾಥ್ – ಕೇದಾರನಾಥ ದೇವಾಲಯ ಸಮಿತಿ (BKTC) ಪ್ರತಿಕ್ರಿಯಿಸಿದೆ. ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಮಹಿಳೆಯ ವಿರುದ್ಧ ರುದ್ರಪ್ರಯಾಗ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ದೇವಾಲಯದ ಸಮಿತಿಯು ತನಿಖೆ ನಡೆಸಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ.
ಈ ವೇಳೆ ಮಹಿಳಾ ಭಕ್ತೆ ಗರ್ಭಗುಡಿಯಲ್ಲಿದ್ದ ಶಿವಲಿಂಗದ ಮೇಲೆ ಕರೆನ್ಸಿ ನೋಟುಗಳನ್ನು ಎಸೆಯುತ್ತಿದ್ದ ವೇಳೆ ಪಕ್ಕದಲ್ಲಿ ಸಾಕಷ್ಟು ಭಕ್ತರಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯನ್ನು ಮಂತ್ರಗಳನ್ನು ಪಠಿಸುವ ಮೂಲಕ ಪ್ರೋತ್ಸಾಹಿಸುತ್ತಿರುವುದು ಕಂಡುಬಂದಿದೆ. ಗರ್ಭಗುಡಿಯಲ್ಲಿ ಪಂಡಿತರ ಸಮ್ಮುಖದಲ್ಲಿ ಈ ಘಟನೆ ನಡೆದಿದ್ದರಿಂದ ಬಿಕೆಟಿಸಿ ಅಧ್ಯಕ್ಷ ಅಜೇಂದ್ರ ಅಜಯ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.
ಘಟನೆ ಕುರಿತು ಉತ್ತರಾಖಂಡ ಸಿಎಂ ಕಚೇರಿ ಟ್ವೀಟ್ ಮಾಡಿದೆ. ಮಹಿಳೆಯೊಬ್ಬರು ಕೇದಾರನಾಥ ಗರ್ಭಗುಡಿಯಲ್ಲಿ ಹಣ ಎರಚುತ್ತಿರುವ ವಿಡಿಯೋ ವೈರಲ್ ಆದ ಬಳಿಕ ರುದ್ರಪ್ರಯಾಗ ಪೊಲೀಸರು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯನಿರ್ವಹಣಾಧಿಕಾರಿ ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಲಾಗಿದೆ ಎಂದು ಕೇದಾರನಾಥ ದೇವಾಲಯ ಸಮಿತಿ ತಿಳಿಸಿದೆ. ಈ ಟ್ವೀಟ್ಗೆ ಪೊಲೀಸ್ ವರಿಷ್ಠಾಧಿಕಾರಿಯ ವಿವರಗಳನ್ನು ಒಳಗೊಂಡಿರುವ ವೀಡಿಯೊವನ್ನು ಸೇರಿಸಲಾಗಿದೆ.