ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೋಗದ ಮಹತ್ವವನ್ನು, ಅದರ ಪ್ರಯೋಜನವನ್ನು ಇಡೀ ಜಗತ್ತಿಗೆ ಸಾರಿದ ದೇಶ ಭಾರತ. ಇಂತಹ ಯೋಗದ ಪ್ರಾಮುಖ್ಯತೆಯನ್ನು ಸಾರುವ ವಿಶಿಷ್ಟವಾದ ಉತ್ಸವವನ್ನು ಕರ್ನಾಟಕದಲ್ಲಿ ಯೋಗಥಾನ್ ಮೂಲಕ ಆಯೋಜಿಸುತ್ತಿರುವುದು ಸಂತೋಷದ ವಿಷಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್. ತಿಳಿಸಿದರು.
ರಾಜ್ಯ ಸರ್ಕಾರದ ನಿರ್ದೇಶನದಂತೆ ೨೬ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ದಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಡಿಯಲ್ಲಿ ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನವನ್ನು ಸಾಧಿಸುವ ಹಿನ್ನಲೆಯಲ್ಲಿ ಯೂತ್ ಫಾರ್ ಯೋಗ ಥೀಮ್ನೊಂದಿಗೆ ’ಯೋಗಥಾನ್ ೨೦೨೩”ನ್ನು ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ ಶ್ರೀಪತಿ ಭಟ್ ವೇದಿಕೆಯಲ್ಲಿ ಭಾನುವಾರ ಬೆಳಿಗ್ಗೆ ನಡೆಯಿತು.
ಪ್ರಾಣಾಯಾಮದ ಜತೆಗೆ ಯೋಗಾಸನಗಳಾದ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ , ತ್ರಿಕೋನಾಸನ , ವಜ್ರಾಸನ, ಶಶಂಕಾಸನ , ಅರ್ಧವೃಸನ, ಪೂರ್ಣವೃಸನ, ಉತ್ತಾನ ಮಂಡುಕಾಸನ, ದಂಡಾಸನ, ವಕ್ರಾಸನ ಸೇರಿದಂತೆ ಹಲವು ಆಸನಗಳನ್ನು ಮಾಡಿಸಿಲಾಯಿತು. ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಅನಂತ ಕೃಷ್ಣ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಮೂಲ್ಕಿ-ಮೂಡುಬಿದಿರೆಯ ಶಾಸಕರಾದ ಉಮಾನಾಥ ಕೋಟ್ಯಾನ್, ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, ದ.ಕ ಜಿಲ್ಲಾ ಪಂಚಾಯತ್ ಸಿಇಒ ಡಾ. ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ, ಯುವಜನ ಮತ್ತು ನಾಗರಿಕ ಸೇವಾ ಇಲಾಖೆಯ ಸಹ ನಿರ್ದೇಶಕರಾದ ರವಿ ನಾಯ್ಕ, ಮೂಡುಬಿದಿರೆ ಪುರಸಭೆ ಅಧ್ಯಕ್ಷರಾದ ಪ್ರಸಾದ್ ಕುಮಾರ್, ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ನ್ಯಾಚುರೋಪಥಿ ಕಾಲೇಜಿನ ಪ್ರಾಚಾರ್ಯ ಡಾ ವನಿತಾ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.