ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲೂ ‘ಗ್ಯಾರಂಟಿ’ ಮ್ಯಾಜಿಕ್ಗೆ ಕಾಂಗ್ರೆಸ್ ಮುಂದಾಗಿದೆ.
ಚುನಾವಣಾ ಪ್ರಚಾರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಲಖಿಂಪುರ ಜಿಲ್ಲೆಯ ನವೋಬೊಯಿಚಾದಲ್ಲಿ ಜನತೆ ಮುಂದೆ ಪಂಚ ಗ್ಯಾರಂಟಿಯನ್ನು ಘೋಷಿಸಿದ್ದಾರೆ. ಜೊತೆಗೆ ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ ಐದು ಪ್ರಮುಖ ಭರವಸೆಗಳನ್ನು ಈಡೇರಿಸುವುದಾಗಿ ಕೂಡಾ ಘೋಷಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ ನಗದು ವರ್ಗಾವಣೆ ಜೊತೆಗೆ ಸ್ವಂತ ಉದ್ಯೋಗ ಇಚ್ಛಿಸುವ ಮಹಿಳೆಯರಿಗೆ 50,000 ರೂಪಾಯಿಗಳ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಆರೋಗ್ಯ ರಕ್ಷಣೆಯ ಭರವಸೆ ಕೂಡಾ ನೀಡಿದ್ದಾರೆ. ಜೊತೆಗೆ ಪ್ರತೀ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ನಗದು ರಹಿತ ಆರೋಗ್ಯ ವಿಮೆ ಘೋಷಿಸಿದ್ದಾರೆ.
10 ಲಕ್ಷ ಸ್ಥಳೀಯ ಜನರಿಗೆ ಶಾಶ್ವತ ಭೂಮಿಯ ಹಕ್ಕು, ಹಿರಿಯ ನಾಗರಿಕರಿಗೆ ಮಾಸಿಕ 1,250 ರೂಪಾಯಿಗಳ ಗೌರವಧನ ನೀಡುವ ಭರವಸೆ ಕೂಡಾ ಅವರು ನೀಡಿದರು.
ಇದೇ ವೇಳೆ ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 100 ದಿನಗಳಲ್ಲೇ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.
ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.



