ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಆತಂಕಗಳನ್ನು ದೀರ್ಘಕಾಲ ಗಂಭೀರವಾಗಿ ಪರಿಗಣಿಸದ ಕೆನಡಾ ಈಗ ಮಹತ್ವದ ಘೋಷಣೆ ಮಾಡಿದೆ. ದೇಶದೊಳಗೆ ನೆಲೆಸಿರುವ ಕೆಲವು ಖಲಿಸ್ತಾನಿ ಅತಿರೇಕಿ ಗುಂಪುಗಳ ಚಟುವಟಿಕೆಗಳು ರಾಷ್ಟ್ರೀಯ ಭದ್ರತೆಗೆ ಸವಾಲಾಗಿವೆ ಎಂದು ಕೆನಡಾ ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಬೆಳವಣಿಗೆ ಭಾರತ-ಕೆನಡಾ ಸಂಬಂಧಗಳ ಮೇಲೂ ಹೊಸ ಚರ್ಚೆಗೆ ಕಾರಣವಾಗಿದೆ.
ಕೆನಡಾದ ಗುಪ್ತಚರ ಸಂಸ್ಥೆ ತನ್ನ ಇತ್ತೀಚಿನ ಭದ್ರತಾ ವರದಿಯಲ್ಲಿ, ಕೆಲ ಸಂಘಟನೆಗಳು ಕೆನಡಾದ ನೆಲವನ್ನು ಬಳಸಿಕೊಂಡು ವಿದೇಶಿ ಗುರಿಗಳ ವಿರುದ್ಧ ಹಿಂಸಾತ್ಮಕ ಚಟುವಟಿಕೆಗಳಿಗೆ ಯೋಜನೆ ರೂಪಿಸುತ್ತಿವೆ, ಹಣ ಸಂಗ್ರಹಿಸುತ್ತಿವೆ ಮತ್ತು ಪ್ರಚಾರ ಕಾರ್ಯ ನಡೆಸುತ್ತಿವೆ ಎಂದು ಉಲ್ಲೇಖಿಸಿದೆ. ಸಮುದಾಯದ ಹೆಸರಿನಲ್ಲಿ ಸಂಗ್ರಹವಾಗುವ ಹಣ ದುರುಪಯೋಗವಾಗುವ ಆತಂಕವನ್ನೂ ವರದಿ ವ್ಯಕ್ತಪಡಿಸಿದೆ.
ಇದನ್ನೂ ಓದಿ:
ಆದರೆ, ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಶಾಂತಿಯುತವಾಗಿ ಮುಂದಿರಿಸುವವರನ್ನು ಉಗ್ರ ಚಟುವಟಿಕೆಗೆ ಸೇರಿಸಲಾಗುವುದಿಲ್ಲ ಎಂದು ಕೆನಡಾ ಸ್ಪಷ್ಟನೆ ನೀಡಿದೆ. ಹಿಂಸೆಗೆ ಪ್ರಚೋದನೆ ನೀಡುವ ಮತ್ತು ಅತಿರೇಕಿ ಚಟುವಟಿಕೆಯಲ್ಲಿ ತೊಡಗುವವರನ್ನಷ್ಟೇ ಭದ್ರತಾ ಅಪಾಯವೆಂದು ಪರಿಗಣಿಸಲಾಗುತ್ತಿದೆ.
ಹೊಸ ನಾಯಕತ್ವದ ಅಡಿಯಲ್ಲಿ ಕೆನಡಾ ಈ ನಿಲುವು ತಾಳಿರುವುದು ಮಹತ್ವ ಪಡೆದಿದೆ. ಉಭಯ ದೇಶಗಳ ನಡುವಿನ ಭದ್ರತಾ ಸಹಕಾರ ಹೆಚ್ಚುವ ನಿರೀಕ್ಷೆ ಮೂಡಿದ್ದು, ಹಳೆಯ ಭಿನ್ನಾಭಿಪ್ರಾಯಗಳಿಗೆ ತೆರೆ ಬೀಳುವ ಸೂಚನೆಗಳು ಕಾಣಿಸುತ್ತಿವೆ.



