ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು ಇಂದು ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ.
ಬಳಿಕ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಸಚಿವ ಎಸ್. ಜೈಶಂಕರ್, ಇತ್ತೀಚಿನ ದಿನಗಳಲ್ಲಿ ಅಮೆರಿಕದ ವೀಸಾ ಪಡೆಯುವಲ್ಲಿ ಭಾರತೀಯ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಅಕ್ರಮ ವಲಸೆಯ ವಿರುದ್ಧ ನಿಮ್ಮ ಕಠಿಣ ನಿರ್ಧಾರಗಳಿಂದ ಕಲಿಯಲು ಬರುವ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ತೊಂದರೆ ಆಗಬಾರದು ಎಂದು ಹೇಳಿದರು.
ನಿಜವಾದ ಪ್ರಯಾಣಿಕರಿಗೆ ತೊಂದರೆಯಾಗಬಾರದು
ಅಮೆರಿಕದ ಅಕ್ರಮ ವಲಸೆಯನ್ನು ನಿಭಾಯಿಸುವಲ್ಲಿ ಭಾರತವು ಸಹಕರಿಸುವುದನ್ನು ಮುಂದುವರೆಸಿದೆ. ಆದರೆ ಇದರಿಂದಾಗಿ ಎರಡು ದೇಶಗಳ ವ್ಯವಹಾರ, ತಂತ್ರಜ್ಞಾನ ಮತ್ತು ಸಂಶೋಧನಾ ಮೇಲೆ ಪರಿಣಾಮ ಬೀರಬಾರದು. ನಿಜವಾದ ಪ್ರಯಾಣಿಕರು ಸಮಸ್ಯೆ ಎದುರಿಸಬಾರದು ಎಂದು ತಿಳಿಸಿದರು.
ಭಾರತದ ಮೇಲೆ ಟಾರ್ಗೆಟ್ ಅಲ್ಲ
ಡಾ. ಎಸ್. ಜೈಶಂಕರ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ ರೂಬಿಯೊ, ಅಮೆರಿಕದ ಈ ನಿರ್ಧಾರದ ಹಿಂದೆ ಭಾರತವನ್ನು ಗುರಿಯಾಗಿಸುವ ಯಾವ ಉದ್ದೇಶವು ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದಿನ ಭವಿಷ್ಯಕ್ಕೆ ಅನಿವಾರ್ಯ
ಇದು ಕೇವಲ ಭಾರತದ ಮೇಲೆ ಹೇರಿದ ನಿರ್ಬಂಧವಲ್ಲ. ಬದಲಾಗಿ ಜಾಗತಿಕ ಮಟ್ಟಕ್ಕೂ ಅನ್ವಯಿಸಲಾಗುತ್ತಿದೆ. ಯಾವುದೇ ಒಂದು ದೇಶ ಹೊಸ ಸುಧಾರಣೆಗಳನ್ನು ಕೈಗೊಂಡಾಗ, ಅದರ ಪರಿವರ್ತನೆ ಮತ್ತು ಘರ್ಷಣೆ ಎರಡು ಇರುತ್ತವೆ. ಇದು ಮುಂದಿನ ಭವಿಷ್ಯಕ್ಕಾಗಿ ತನ್ನ ವಲಸೆ ವ್ಯವಸ್ಥೆಯನ್ನು ಆಧುನೀಕರಿಸಲು ಅಮೆರಿಕ ಕೈಗೊಂಡ ಆದ್ಯತೆ ಎಂದು ರುಬಿಯೊ ಹೇಳಿದರು.
ಕಳೆದ ಹಲವು ವರ್ಷಗಳಿಂದ 20 ಮಿಲಿಯನ್ ಜನರು ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ್ದಾರೆ. ಹೀಗಾಗಿ,ಅನಿವಾರ್ಯವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.



