ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ಪ್ರಧಾನಿ ಮೋದಿ ಉಜ್ಬೇಕಿಸ್ತಾನ ಪ್ರವಾಸದಲ್ಲಿದ್ದಾರೆ. ಇಲ್ಲಿನ ʼತಾಷ್ಕೆಂಟ್ ಸ್ಟೇಟ್ ಯುನಿವರ್ಸಿಟಿ ಆಫ್ ಒರಿಯೆಂಟಲ್ ಸ್ಟಡೀಸ್ʼನಲ್ಲಿರುವ ʼಮಹಾತ್ಮ ಗಾಂಧಿ ಕೇಂದ್ರʼಕ್ಕೆ ಭೇಟಿ ನೀಡಿದ್ದು, ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ್ದಾರೆ.
ಭಾರತೀಯ ಸಂಸ್ಕೃತಿ, ಯೋಗ ಹಾಗೂ ಸಾಹಿತ್ಯದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿಗೆ ಉಜ್ಬೇಕಿಸ್ತಾನದ ವಿದ್ಯಾರ್ಥಿಗಳ ಹಿಂದಿ ಉಚ್ಛಾರಣೆ ಕಂಡು ಸಂತಸವಾಗಿದೆ. ವಿದ್ಯಾರ್ಥಿಗಳು ಪ್ರಧಾನಿ ಮೋದಿ ರಚಿಸಿದ ಕವನಗಳನ್ನು ಹಿಂದಿಯಲ್ಲಿ ಒಂದೂ ತಪ್ಪಿಲ್ಲದಂತೆ ವಾಚಿಸಿದ್ದಾರೆ. ಇನ್ನು ಪ್ರತೀ ವಿದ್ಯಾರ್ಥಿಯೂ ಸಂವಾದದ ವೇಳೆ ಕೇಳುವ ಪ್ರಶ್ನೆಗಳು, ಹೇಳುವ ಉತ್ತರಗಳೂ ಹಿಂದಿಯಲ್ಲಿಯೇ ಇದ್ದು, ಮಕ್ಕಳ ಭಾಷಾಜ್ಞಾನ, ಉಚ್ಛಾರಣೆ ಹಾಗೂ ಸ್ಪಷ್ಟತೆಯನ್ನು ಕಂಡು ಪ್ರಧಾನಿ ಮೋದಿ ನಿಬ್ಬೆರಗಾಗಿದ್ದಾರೆ.
ಉಜ್ಬೇಕ್ನಲ್ಲಿ ಭಾರತದ ಸಂಸ್ಕೃತಿಕೆ ಅಪಾರ ಗೌರವವಿದೆ. ನಮ್ಮ ಕಲೆ, ಜೀವನಶೈಲಿ, ಆಚಾರ, ವಿಚಾರವನ್ನು ಉಜ್ಬೇಕ್ನಲ್ಲಿ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಸಮಾಜವನ್ನು ಆಳವಾಗಿ ಅರಿಯಲು ರಾಮಾಯಣ ಹಾಗೂ ಮಹಾಭಾರತವನ್ನು ಓದಲಾಗುತ್ತದೆ.
ಪ್ರಾಚೀನ ತಮಿಳು ಸಾಹಿತ್ಯದ ಶ್ರೇಷ್ಠ ನೀತಿ ಗ್ರಂಥವಾದ ಸಂತ ತಿರುವಳ್ಳುವರ್ ರಚಿತ ‘ತಿರುಕ್ಕುರಳ್’ ಅನ್ನು ಉಜ್ಬೇಕ್ ಭಾಷೆಗೆ ಅನುವಾದಿಸುವಂತೆ ಪ್ರಧಾನಿ ಮೋದಿ ವಿಶ್ವವಿದ್ಯಾಲಯದ ವಿದ್ವಾಂಸರಿಗೆ ಕರೆ ನೀಡಿದರು. ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ತಮಿಳಿನ ಜ್ಞಾನ ಪರಂಪರೆಯು ಉಜ್ಬೇಕ್ ಜನತೆಗೆ ಭಾರತೀಯ ತತ್ವಶಾಸ್ತ್ರದ ಆಳವನ್ನು ಪರಿಚಯಿಸಲು ಸಹಕಾರಿಯಾಗಲಿದೆ ಎಂದರು. ಇದಕ್ಕೆ ವಿವಿಯ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.



