ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗೋಕರ್ಣದ ಅಶೋಕೆಯಲ್ಲಿರುವ ಶ್ರೀರಾಮಚಂದ್ರಾಪುರ ಮೂಲ ಮಠದಲ್ಲಿ ನಡೆಯುತ್ತಿರುವ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಅನ್ನಬ್ರಹ್ಮ ಚಾತುರ್ಮಾಸ್ಯದ ಸಂದರ್ಭ ಶನಿವಾರ ಹಾಲಕ್ಕಿ ಸಮಾಜದವರಿಂದ ಸ್ವರ್ಣ ಪಾದುಕಾ ಪೂಜೆ ನೆರವೇರಿತು.

ಪರಂಪರಾಗತವಾಗಿ ಶ್ರೀರಾಮಚಂದ್ರಾಪುರ ಮಠಕ್ಕೆ ನಡೆದುಕೊಳ್ಳುತ್ತಿರುವ ಹಾಲಕ್ಕಿ ಸಮಾಜದವರು ಸಮರ್ಪಿಸಿದ ಸ್ವರ್ಣಪಾದುಕಾ ಪೂಜೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಹಾಲಕ್ಕಿ ಸಮಾಜದವರು ಶ್ರೀಮಠದ ಕೆಕ್ಕಾರು ಶಾಖಾ ಮಠಕ್ಕೆ ಪರಂಪರೆಯಿಂದ ತಮ್ಮ ಶ್ರದ್ಧಾಭಕ್ತಿಗಳನ್ನು ಸಲ್ಲಿಸುತ್ತಾ ಬಂದಿದ್ದು. ಅದರಲ್ಲಿ ತಮ್ಮ ಹಿತವನ್ನು ಕಂಡಿದ್ದಾರೆ. ಹಾಲಕ್ಕಿ ಸಮಾಜದ ಜೊತೆ ಶ್ರೀಮಠ ಸದಾ ಜೊತೆಗಿರಲಿದ್ದು, ಸರ್ಕಾರವೂ ಕೂಡ ಈ ಸಮಾಜಕ್ಕೆ ಸಲ್ಲಬೇಕಾದ ಸೌಕರ್ಯಗಳನ್ನು ಒದಗಿಸಬೇಕು. ಅನ್ನಬ್ರಹ್ಮ ಚಾತುರ್ಮಾಸ್ಯದಲ್ಲಿ ಹಾಲಕ್ಕಿ ಸಮಾಜಕ್ಕೆ ಅಕ್ಕಿಯನ್ನು ಆಶೀರ್ವಾದ ಪೂರ್ವಕವಾಗಿ ಕೊಡಲಾಗಿದೆ. ಆ ಸಮಾಜಕ್ಕೆ ಒಳಿತಾಗಲಿ ಎಂದು ಆಶೀರ್ವಾದಿಸಿದರು.

ಹಾಲಕ್ಕಿ ಸಮಾಜದ ಪರವಾಗಿ ಮಾತನಾಡಿದ ಡಾ. ಹನುಮಂತ ಗೌಡರು, ನಾವು ತಲೆತಲಾಂತರದಿಂದ ಶ್ರೀಮಠಕ್ಕೆ ನಡೆದುಕೊಳ್ಳುತ್ತಾ ಬಂದಿದ್ದು, ಶ್ರೀಗುರು ಪರಂಪರೆಯ ಆಶೀರ್ವಾದದಿಂದ ನಮ್ಮ ಸಮಾಜ ಉತ್ತಮ ಮಾರ್ಗದಲ್ಲಿ ಸಾಗುತ್ತಿದೆ. ನಾವು ಇದರಲ್ಲಿ ನೆಮ್ಮದಿ ಕಂಡಿದ್ದೇವೆ ಎಂದರು.
ಇದನ್ನೂ ಓದಿ
ಹಾಲಕ್ಕಿ ಜಾನಪದ ಹಾಡಿನ ಮೂಲಕ ಶ್ರೀಗುರು ಪೀಠದ ಕುರಿತಾಗಿ ತಮಗಿರುವ ಭಕ್ತಿಯನ್ನು ಸಮರ್ಪಿಸಿದರು. ಬಿ.ಎಸ್ ಗೌಡರ್, ಎಸ್. ಜಿ. ಗೌಡರ್, ಮಂಜುನಾಥ ಗೌಡರ್ ಕೆಕ್ಕಾರು ಸೇರಿದಂತೆ ನೂರಾರು ಹಾಲಕ್ಕಿ ಗುರು ಬಂಧುಗಳು ಉಪಸ್ಥಿತರಿದ್ದರು.



