ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿನ ತೃತೀಯ ಭಾಷೆಗೆ ಅಂಕ ನೀಡುವ ಕುರಿತು ಕೋರ್ಟ್ ನೀಡಿದ ಆದೇಶವನ್ನು ನಾವು ಗೌರವಿಸುತ್ತೇವೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಗೊಂದಲದ ಗೂಡಾಗಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿನ ಹಿಂದಿ ಸಹಿತ ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ನೀಡಲು ಹೈಕೋರ್ಟ್ ಆದೇಶ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಈ ಸಂಬಂಧ ನಾವು ಸಿಎಂ ಜೊತೆ ಮಾತನಾಡಿದ್ದೇನೆ. ನಾಳೆ ಅವರನ್ನು ಭೇಟಿಯಾಗಿ ಮುಂದಿನ ಹೆಜ್ಜೆಯ ಕುರಿತು ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.
ಇದರಿಂದ ಫಲಿತಾಂಶ ಪ್ರಕಟಣೆಯಲ್ಲಿ ಒಂದೆರಡು ದಿನ ವ್ಯತ್ಯಾಸವಾಗಬಹುದೇ ಹೊರತು ಯಾವುದೇ ರೀತಿಯ ದೊಡ್ಡ ಮಟ್ಟದಲ್ಲಿ ವಿಳಂಬ ಆಗುವುದಿಲ್ಲ. ಈಗಾಗಲೇ ಅಂತಿಮ ಹಂತದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದ್ದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮಕ್ಕಳ ಹಿತಕ್ಕಾಗಿ ನಾವು ಗ್ರೇಡ್ ಮಾದರಿ ತರಲು ಹೊರಟಿದ್ದೆವು. ಆದರೆ ಕೋರ್ಟ್ ಆದೇಶಕ್ಕೆ ಗೌರವ ನೀಡುತ್ತೇವೆ. ಹೀಗಾಗಿ ನಿಯಮಗಳ ಪ್ರಕಾರವೇ ಈ ಬಾರಿ ಫಲಿತಾಂಶ ನೀಡುತ್ತೇವೆ ಎಂದು ಹೇಳಿದರು.



