ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಹಾಗೂ ಎನ್ಸಿಪಿ ನಾಯಕ ಅನಿಲ್ ದೇಶಮುಖ್ ಅವರಿಂದ ದಿಶಾ ಸಾಲಿಯಾನ್ ತಂದೆ 500 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ.
ನ್ಯಾಯಕ್ಕಾಗಿ ಸತೀಶ್ ಸಾಲಿಯಾನ್ ನಡೆಸುತ್ತಿರುವ ಹೋರಾಟವನ್ನು ‘ರಾಜಕೀಯ ಪ್ರೇರಿತ’ ಎಂದು ಬಿಂಬಿಸಲು ಈ ಇಬ್ಬರೂ ನಾಯಕರು ಪ್ರಯತ್ನಿಸಿದ್ದಾರೆ ಎಂದು ನೋಟಿಸ್ನಲ್ಲಿ ಆರೋಪಿಸಲಾಗಿದೆ. ದಿಶಾ ಸಾಲಿಯಾನ್ ಅವರು ಆರು ವರ್ಷದ ಹಿಂದೆ ಮುಂಬೈನ ಮಲಾಡ್ ಪ್ರದೇಶದಲ್ಲಿರುವ ಎತ್ತರದ ವಸತಿ ಕಟ್ಟದಿಂದ ಬಿದ್ದು ಮೃತಪಟ್ಟಿದ್ದರು. ಇದನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಲಾಗಿತ್ತು. ಇದಾದ ಆರು ದಿನಗಳಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾದರು.
ಮಗಳ ಸಾವಿನ ಬಗ್ಗೆ ಕೂಲಂಕಷ ತನಿಖೆ ಆಗಬೇಕು, ಎಫ್ಐಆರ್ ದಾಖಲಿಸಿ ಹೊಸತಾಗಿ ತನಿಖೆ ನಡೆಸಬೇಕು ಎಂದು ದಿಶಾ ತಂದೆ ಬಾಂಬೆ ಹೈ ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದಲ್ಲಿ ಆದಿತ್ಯ ಠಾಕ್ರೆ, ಡಿನೋ ಮೋರಿಯಾ, ಸೂರಜ್ ಪಾಂಚೋಲಿ ಹಾಗೂ ರಿಯಾ ಚಕ್ರವರ್ತಿ ಹೆಸರು ಕೇಳಿಬಂದಿದೆ. ದಿಶಾ ಮೃತಪಟ್ಟ ಆರು ವರ್ಷದ ನಂತರ ಸಿಬಿಐ ತನಿಖೆ ವಹಿಸಿಕೊಂಡಿದೆ.
ಸತೀಶ್ ಸಾಲಿಯಾನ್ ಅವರ ಉದ್ದೇಶಗಳನ್ನು ಪ್ರಶ್ನಿಸಿದ್ದಲ್ಲದೆ, ನ್ಯಾಯಕ್ಕಾಗಿ ಅವರು ನಡೆಸಿದ ಹೋರಾಟವನ್ನು ‘ರಾಜಕೀಯ ಪ್ರೇರಿತ, ದುರುದ್ದೇಶಪೂರಿತ ಮತ್ತು ತಮ್ಮ ವರ್ಚಸ್ಸಿಗೆ ಧಕ್ಕೆ ತರುವ ಗುಪ್ತ ಉದ್ದೇಶದಿಂದ ಕೂಡಿದೆ’ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಆದಿತ್ಯ ಠಾಕ್ರೆ ವಿರುದ್ಧ ₹500 ಕೋಟಿ ಲೀಗಲ್ ನೋಟಿಸ್ನಲ್ಲಿ ಆರೋಪಿಸಲಾಗಿದೆ. ಮಗಳನ್ನು ಕಳೆದುಕೊಂಡ ಸಂಕಟ ಒಬ್ಬ ತಂದೆಗೆ ಮಾತ್ರ ಗೊತ್ತು. ಮಗಳ ಮೇಲೆ ಸಾಮೂಹಿಕ ಅತ್ಯಾಚಾರ, ಹಲ್ಲೆ ನಡೆಸಲಾಗಿದೆ. ಇದೆಲ್ಲದರ ವಿಚಾರಣೆ ಆಗಬೇಕು. ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಒಬ್ಬ ತಂದೆ ಒಂಟಿ ಹೋರಾಟಕ್ಕೆ ಇಳಿದರೆ ಇದು ರಾಜಕೀಯ ಪ್ರೇರಿತ ಎಂದು ಹೇಳುತ್ತಿದ್ದಾರೆ ಎಂದು ನೊಟೀಸ್ನಲ್ಲಿ ಹೇಳಲಾಗಿದೆ.



