ಹೊಸದಿಗಂತ ವರದಿ ಹಾಸನ:
ಗ್ರಾಹಕರ ಸೋಗಿನಲ್ಲಿ ಮೊಬೈಲ್ ಅಂಗಡಿಗೆ ಬಂದ ಇಬ್ಬರು ಕಳ್ಳರು ಹೊಸ ಮೊಬೈಲ್ ಕದ್ದು ಪರಾರಿಯಾಗಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ನಡೆದಿದೆ.
ಬಾಳ್ಳುಪೇಟೆಯ ಎ.ಕೆ. ಕಮ್ಯುನಿಕೇಶನ್ನಲ್ಲಿ ಘಟನೆ ನಡೆದಿದ್ದು, ಅಂಗಡಿ ಮಾಲೀಕ ಅಮೀರ್ಖಾನ್ ಅವರಿಗೆ ಸೇರಿದ ಮೊಬೈಲ್ ಅಂಗಡಿಯಾಗಿದೆ. ಒಡಿಶಾ ಮೂಲದ ಇಬ್ಬರು ವಲಸೆ ಕಾರ್ಮಿಕರು ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದಿದ್ದರು. ಈ ವೇಳೆ ಅಂಗಡಿ ಮಾಲೀಕ ಹೊರಗೆ ಹೋಗಿದ್ದರೆ, ಸಿಬ್ಬಂದಿ ಮೊಬೈಲ್ ರಿಪೇರಿಯಲ್ಲಿ ತೊಡಗಿದ್ದರು. ಇದನ್ನೇ ದುರುಪಯೋಗಪಡಿಸಿಕೊಂಡ ಓರ್ವ ಆರೋಪಿ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆದು ಮತ್ತೋರ್ವ ಆರೋಪಿ ಅಂಗಡಿಯಲ್ಲಿದ್ದ ಹೊಸ ಮೊಬೈಲ್ವೊಂದನ್ನು ಕದ್ದು ಪರಾರಿಯಾಗಿದ್ದಾನೆ.
ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮತ್ತೋರ್ವನಿಗಾಗಿ ಶೋಧ ಮುಂದುವರಿಸಿದ್ದಾರೆ.
ಸಕಲೇಶಪುರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ



