July 28, 2026
Tuesday, July 28, 2026
spot_img

ಬಂಗಾಳ ಚುನಾವಣಾ ಅಖಾಡಕ್ಕೆ ಇಳಿದ ಯುಪಿ ಸಿಎಂ ಯೋಗಿ: ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಪಶ್ಚಿಮ ಬಂಗಾಳ ಚುನಾವಣಾ ಕಣ ರಂಗೇರುತ್ತಿದ್ದು, ಇಂದು ಪ್ರಚಾರದ ಅಖಾಡಕ್ಕೆ ಇಳಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಂದಕುಮಾರ್ ಪ್ರದೇಶದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ರಾಜ್ಯದಲ್ಲಿ ಟಿಎಂಸಿ ಸರ್ಕಾರದಿಂದ ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಸುರಕ್ಷತೆ ಮತ್ತು ವ್ಯಾಪಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಟೀಕಿಸಿದರು.

ಸ್ವಂತ ರಾಜಕೀಯ ಲಾಭಕ್ಕಾಗಿ ಟಿಎಂಸಿ ಸರಕಾರ ರಾಜ್ಯದಲ್ಲಿ ದುರ್ಗಾ ಪೂಜೆ ಮತ್ತು ರಾಮ ನವಮಿ ಮೆರವಣಿಗೆಗಳ ಮೇಲೆ ನಿರ್ಬಂಧ ಹೇರಿ ಹಿಂದು ಹಬ್ಬಗಳನ್ನು ತಡೆಯುವ ಯತ್ನಿಸುತ್ತಿದೆ. ಜೊತೆಗೆ ಹೆಚ್ಚುತ್ತಿರುವ ಬಾಂಗ್ಲಾದೇಶಿ ನುಸುಳುಕೋರರ ಪ್ರಭಾವದಿಂದ ಇಂದು ರಾಜ್ಯದ ಜನಸಂಖ್ಯಾ ಸಮತೋಲನವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಕೇಂದ್ರ ಸರಕಾರ ಶಾಶ್ವತ ಶಾಂತಿ ಸ್ಥಾಪಿಸಿದ್ದು, ಇದು ಏಕ ಭಾರತ, ಶ್ರೇಷ್ಠ ಭಾರತದ ನಿಜವಾದ ಗೆಲುವು. ಅದೇ ರೀತಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಕನಸುಗಳಿಗೆ ಕಾಂಗ್ರೆಸ್ ಬೆಲೆ ನೀಡಿದ್ದರೂ, ಮೋದಿ ಸರ್ಕಾರವು ಭಯೋತ್ಪಾದನೆಯ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯುವ ಮೂಲಕ ಅದನ್ನು ಸಾಧಿಸಿದೆ ಎಂದು ಹೇಳಿದರು.

ಈ ವೇಳೆ ಉತ್ತರ ಪ್ರದೇಶದ ಮಾದರಿಯನ್ನು ಉಲ್ಲೇಖಿಸಿದ ಯೋಗಿ, 2017ಕ್ಕಿಂತ ಮೊದಲು ಯುಪಿಯಲ್ಲಿ ಯಾವ ರೀತಿ ನಿರಂತರ ಗಲಭೆಗಳು ಮತ್ತು ಅಶಾಂತಿ ಇತ್ತು, ಇಂದು ಯಾವ ರೀತಿಯಾಗಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಬಂದ ಬಳಿಕ ಯಾವುದೇ ಗಲಭೆಗಳಿಲ್ಲದೆ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !