ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯಲ್ಲಿ ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 177 ಕೋಟಿ ರೂ ಹಣ ಜಮೆಯಾಗಿದ್ದು ಈಗ ಇದನ್ನು ವಾಪಾಸ್ ಪಡೆದುಕೊಳ್ಳಲು ಮರುಪರಿಶೀಲನೆ ನಡೆಸಲು ಸರ್ಕಾರ ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
30 ಕೋಟಿ ವಸೂಲಿ
ಮೃತರ ಖಾತೆಗಳಿಗೆ ಜಮೆಯಾಗಿದ್ದ 177 ಕೋಟಿ ರೂಗಳಲ್ಲಿ ಈಗಾಗಲೇ 30 ಕೋಟಿಯನ್ನು ವಸೂಲಿ ಮಾಡಲಾಗಿದೆ. ಉಳಿದ ಮೊತ್ತವನ್ನು ವಾಪಸ್ ಪಡೆಯಲು ಕ್ರಮ ಮುಂದುವರಿದಿದೆ. ಜತೆಗೆ ಬಯೋಮೆಟ್ರಿಕ್ ದೃಢೀಕರಣದಂತಹ ಸುರಕ್ಷತಾ ಕ್ರಮಗಳನ್ನೂ ಸರ್ಕಾರ ಪರಿಶೀಲಿಸುತ್ತಿದೆ.
ಗೃಹಜ್ಯೋತಿಗೂ ಇದೇ ಅಭಿಯಾನ
ಗೃಹಜ್ಯೋತಿ ಯೋಜನೆಗಾಗಿ ಸರ್ಕಾರ ಇದೇ ರೀತಿಯ ಮರು ಪರಿಶೀಲನಾ ಅಭಿಯಾನವನ್ನು ಪ್ರಾರಂಭಿಸಿದೆ. ಗೃಹಜ್ಯೋತಿ ಪ್ರಯೋಜನಗಳು ಅರ್ಹ ಮನೆಗಳಿಗೆ ಮಾತ್ರ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.



