ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ರಾಮಮಂದಿರದ ದೇಣಿಗೆ ನಿಧಿ ನಿರ್ವಹಣೆ ಕುರಿತ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ದೇವಸ್ಥಾನದ ಕಾಣಿಕೆ ಹಣದ ದುರುಪಯೋಗದ ಆರೋಪಗಳ ನಡುವೆಯೇ ದೇವಾಲಯದ ಸಿಬ್ಬಂದಿಯೊಬ್ಬರ ಮನೆಯಿಂದ ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಿಬ್ಬಂದಿ ನಿವಾಸದ ಮೇಲೆ ದಾಳಿ
ಪೊಲೀಸರು ಅಯೋಧ್ಯೆಯ ರುಡೌಲಿ ಪ್ರದೇಶದಲ್ಲಿರುವ ಲವಕುಶ್ ಮಿಶ್ರಾ ಎಂಬ ಸಿಬ್ಬಂದಿಯ ನಿವಾಸದ ಮೇಲೆ ದಾಳಿ ನಡೆಸಿ ಸುಮಾರು 10 ರಿಂದ 12 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆ ಟ್ರಸ್ಟ್ನ ಪ್ರಮುಖ ಅಧಿಕಾರಿಗಳ ಸಮ್ಮುಖದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ:
ತನಿಖೆ ವಿಸ್ತರಣೆ
ದೇಣಿಗೆ ಹಣ ಎಣಿಸುವ ಜವಾಬ್ದಾರಿ ಹೊಂದಿದ್ದ ಇಬ್ಬರು ಸಿಬ್ಬಂದಿಯನ್ನು ಟ್ರಸ್ಟ್ ಅಮಾನತುಗೊಳಿಸಿದ್ದು, ಅವರ ವಿರುದ್ಧ ವಿಚಾರಣೆ ಮುಂದುವರೆದಿದೆ. ಕಡಿಮೆ ವೇತನ ಪಡೆಯುತ್ತಿದ್ದ ಕೆಲವು ಸಿಬ್ಬಂದಿಯ ಆಸ್ತಿ ಹಾಗೂ ಹೂಡಿಕೆಗಳಲ್ಲಿ ಏಕಾಏಕಿ ಏರಿಕೆ ಕಂಡುಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ.
ರಾಮಮಂದಿರದ ದೇಣಿಗೆ ನಿಧಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆ, ಪ್ರಕರಣದ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸುವಂತೆ ಟ್ರಸ್ಟ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಆರೋಪಗಳ ಸತ್ಯಾಸತ್ಯತೆ ಕುರಿತು ಅಧಿಕಾರಿಗಳು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.



