ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ನ ಲುಧಿಯಾನ ನಗರದಲ್ಲಿರುವ ಕೈಗಾರಿಕಾ ಘಟಕವೊಂದರಲ್ಲಿ ಸಂಭವಿಸಿದ ವಿಷಕಾರಿ ಅನಿಲ ಸೋರಿಕೆ ಭಾರೀ ದುರಂತಕ್ಕೆ ಕಾರಣವಾಗಿದೆ.
ಮಧ್ಯರಾತ್ರಿ ನಡೆದ ಈ ಘಟನೆಯಲ್ಲಿ ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದು, ನಾಲ್ವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪ್ರಜ್ಞಾಹೀನರಾದ ಕಾರ್ಮಿಕರು ಆಸ್ಪತ್ರೆಗೆ ದಾಖಲು
ಕಾರ್ಖಾನೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಅನಿಲ ಸೋರಿಕೆ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮ ಹಲವು ಕಾರ್ಮಿಕರು ಉಸಿರಾಟದ ತೊಂದರೆ ಅನುಭವಿಸಿ ಪ್ರಜ್ಞೆ ತಪ್ಪಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:
ತಂದೆ-ಮಗ ಇಬ್ಬರ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ
ಮೃತರಲ್ಲಿ ಗಾಸ್ಪುರ ನಿವಾಸಿ ಮಾನ್ ಸಿಂಗ್ ಹಾಗೂ ಅವರ ಪುತ್ರ ಅಮಿತ್ ಸೇರಿದ್ದಾರೆ. ಮತ್ತೊಬ್ಬ ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಒಂದೇ ಕುಟುಂಬದ ಇಬ್ಬರು ಸದಸ್ಯರು ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ದುಃಖ ಮೂಡಿಸಿದೆ.
ಕುಟುಂಬಕ್ಕೆ ಮಾಹಿತಿ ಸಿಗದೇ ಆಕ್ರೋಶ
ಮೃತರ ಕುಟುಂಬದವರು, ಘಟನೆ ನಡೆದ ಬಳಿಕವೂ ಕಾರ್ಖಾನೆ ಆಡಳಿತದಿಂದ ಯಾವುದೇ ಮಾಹಿತಿ ನೀಡಲಾಗಿಲ್ಲ ಎಂದು ಆರೋಪಿಸಿದ್ದಾರೆ. ಬೆಳಗ್ಗೆ ಮನೆಗೆ ಮರಳದ ಕಾರಣ ಹುಡುಕಾಟ ನಡೆಸಿದಾಗ ಆಸ್ಪತ್ರೆಗೆ ದಾಖಲಿಸಿರುವ ವಿಷಯ ತಿಳಿದುಬಂದಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.



