September 17, 2026
Thursday, September 17, 2026
spot_img

SHOCKING | ಪತ್ನಿಯ ಮೇಲಿನ ಕೋಪಕ್ಕೆ ಇಬ್ಬರು ಮಕ್ಕಳನ್ನೇ ಕಾಲುವೆಗೆ ಎಸೆದ ಪಾಪಿ ತಂದೆ

ಹೊಸದಿಗಂತ ವರದಿ ಯಾದಗಿರಿ:

ಪತ್ನಿಯೊಂದಿಗಿನ ಕೌಟುಂಬಿಕ ಕಲಹದಿಂದ ಆಕ್ರೋಶಗೊಂಡ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗಂಗನಾಳ ಗ್ರಾಮದಲ್ಲಿ ಬುಧವಾರ ನಡೆದಿದೆ. ಘಟನೆ ಬಳಿಕ ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಗೋಗಿ ಗ್ರಾಮದ ಸಮೀಪದ ಬೋರುಕ ಕಂಪನಿ ಬಳಿ ಇರುವ ಕಾಲುವೆಯಲ್ಲಿ ಶಾಂತಪ್ಪ ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಶಾಂತಪ್ಪ ತನ್ನ ಪತ್ನಿ ರೇಣುಕಾ ಅವರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

ಬೈಕ್‌ನಲ್ಲಿ ಕರೆದೊಯ್ದು ಕಾಲುವೆಗೆ ಎಸೆದ ಪತಿ

ಬುಧವಾರ ಶಾಂತಪ್ಪ ತನ್ನ ಬೈಕ್‌ನಲ್ಲಿ ಮಕ್ಕಳಾದ ಸಾನ್ವಿ (9) ಮತ್ತು ಸೃಜನ್ (2) ಅವರನ್ನು ಕರೆದೊಯ್ದಿದ್ದಾನೆ. ಬಳಿಕ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಪೊಲೀಸರ ಮುಂದೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ದಂಪತಿಯ ಮತ್ತೋರ್ವ ಮಗಳು ಅದೃಷ್ಟವಶಾತ್ ಪಾರಾಗಿದ್ದಾಳೆ. ಆಕೆಯನ್ನು ತಾಯಿಯ ಆಶ್ರಯಕ್ಕೆ ಒಪ್ಪಿಸಲಾಗಿದೆ. ಆದರೆ ಕಾಲುವೆಗೆ ಎಸೆಯಲ್ಪಟ್ಟಿರುವ ಇಬ್ಬರು ಮಕ್ಕಳ ಸುಳಿವು ಇನ್ನೂ ಪತ್ತೆಯಾಗಿಲ್ಲ.

ಇದನ್ನೂ ಓದಿ:

ಮಕ್ಕಳಿಗಾಗಿ ಶೋಧ ಕಾರ್ಯ

ಇಬ್ಬರು ಮಕ್ಕಳಿಗಾಗಿ ಪೊಲೀಸರು ಹಾಗೂ ಸಿಬ್ಬಂದಿ ಕಾಲುವೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮಕ್ಕಳ ದೇಹಗಳು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪತ್ನಿಯೊಂದಿಗಿನ ನಿರಂತರ ಕೌಟುಂಬಿಕ ಕಲಹ ಹಾಗೂ ಆಕೆಯ ಮೇಲಿನ ಕೋಪದಿಂದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಘಟನೆಯ ನಿಖರ ಕಾರಣದ ಕುರಿತು ಗೋಗಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !