ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಶಿವಸೇನೆ ವಿಚಾರವೇ ಚರ್ಚೆಯ ಕೇಂದ್ರಬಿಂದುವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಪಕ್ಷವನ್ನೇ ನಿಜವಾದ ಶಿವಸೇನೆ ಎಂದು ಬಣ್ಣಿಸಿದ್ದು, ಉದ್ಧವ್ ಠಾಕ್ರೆ ಬಣದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಶಿಂಧೆ ಬಣಕ್ಕೆ ಬೆಂಬಲ
ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಬಾಳಾಸಾಹೇಬ್ ಠಾಕ್ರೆ ಅವರ ಹಿಂದೂತ್ವದ ವಿಚಾರಧಾರೆಯನ್ನು ಮುಂದುವರಿಸುತ್ತಿರುವವರು ಏಕನಾಥ್ ಶಿಂಧೆ ಎಂದು ಹೇಳಿದರು. ಇದೇ ಕಾರಣಕ್ಕೆ ಮೂಲ ಶಿವಸೇನೆ ಗುರುತನ್ನು ಶಿಂಧೆ ಬಣ ಉಳಿಸಿಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ:
ರಾಜಕೀಯ ವಲಯದಲ್ಲಿ ಕುತೂಹಲ
ಈ ಹೇಳಿಕೆ ಹೊರಬಿದ್ದಿರುವುದು ಮಹಾರಾಷ್ಟ್ರ ರಾಜಕೀಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಬಣದ ಕೆಲ ನಾಯಕರು ಮತ್ತು ಸಂಸದರಲ್ಲಿ ಅಸಮಾಧಾನ ಇದೆ ಎಂಬ ವರದಿಗಳ ನಡುವೆಯೇ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.
ಚಿಹ್ನೆ ಮತ್ತು ಹೆಸರಿನ ನೆನಪು
ಚುನಾವಣಾ ಆಯೋಗ ಈಗಾಗಲೇ ‘ಬಿಲ್ಲು-ಬಾಣ’ ಚಿಹ್ನೆ ಹಾಗೂ ‘ಶಿವಸೇನೆ’ ಹೆಸರಿನ ಹಕ್ಕನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡಿರುವುದನ್ನು ಉಲ್ಲೇಖಿಸಿದ ಅಮಿತ್ ಶಾ, ಪಕ್ಷದ ಮೂಲ ಗುರುತು ಶಿಂಧೆ ತಂಡದ ಬಳಿಯೇ ಇದೆ ಎಂದು ಪುನರುಚ್ಚರಿಸಿದರು.



