ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಸಿಎಂ, ನಟ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಕುರಿತು ದಿನಕ್ಕೊಂದು ಸುದ್ದಿ ಹೊರಬರುತ್ತಿದೆ.
ಅತ್ತ ಅಭಿಮಾನಿಗಳು ಸಿನಿಮಾ ಶೀಘ್ರದಲ್ಲೇ ತೆರೆ ಕಾಣಲಿದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಇದರ ನಡುವೆ ಸಿನಿಮಾದ ನಿರ್ಮಾಪಕ ಕೆವಿಎನ್ ಪ್ರೊಡಕ್ಷನ್ನ ಮಾಲೀಕ ವೆಂಕಟ್ ಅವರು, ಸಿನಿಮಾದ ಸೆನ್ಸಾರ್ ಪ್ರಮಾಣ ಪತ್ರ ಮತ್ತು ಸಿನಿಮಾದ ಬಿಡುಗಡೆ ಕುರಿತಾಗಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ನ ಮಾಲೀಕ ಹೇಳಿದ್ದೇನು?
ತಿರುಚೆಂದೂರಿನ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಿರ್ಮಾಪಕ ವೆಂಕಟ್ ಅವರು ಚಿತ್ರದ ಬಿಡುಗಡೆಯ ಕುರಿತು ಮಾತನಾಡಿದ್ದು, ನಾನು ಶಾಂತಿ ಮತ್ತು ದೇವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಜನ ನಾಯಗನ್’ ಚಿತ್ರಕ್ಕೆ ಇನ್ನೂ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿಲ್ಲ, ಆದರೆ ಅದು ಯಾವುದೇ ಕ್ಷಣದಲ್ಲಾದರೂ ಸಿಗಬಹುದು. ಸೆನ್ಸಾರ್ ಪ್ರಮಾಣಪತ್ರ ಕೈ ಸೇರಿದ ತಕ್ಷಣ, ನಾವು ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೇವೆ. ಇದೆಲ್ಲವೂ ಶೀಘ್ರದಲ್ಲೇ ನಡೆಯಲಿದೆ ಎಂದು ತಿಳಿಸಿದ್ದಾರೆ.
ರಾಜಕೀಯಕ್ಕೆ ಪ್ರವೇಶಿಸಿದ ನಂತರ ವಿಜಯ್, ಸಿನಿಮಾ ರಂಗದಿಂದ ದೂರ ಸರಿದಿದ್ದು, ‘ಜನ ನಾಯಕನ್’ ಕೊನೆಯ ಚಿತ್ರವಾಗಿದೆ. ಹೀಗಾಗಿ ಅಭಿಮಾನಿಗಳು ಈ ಚಿತ್ರ ರಿಲೀಸ್ ಗೆ ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು ಸಿಗದ ಸೆನ್ಸಾರ್ ಪತ್ರ
ಈ ಹಿಂದೆ ಜನವರಿಯಲ್ಲಿ ಬಿಡುಗಡೆ ಮಾಡಲು ಯೋಜಿಸಿತ್ತು. ಆದರೆ, ಸೆನ್ಸಾರ್ ಮಂಡಳಿಯು ಪ್ರಮಾಣಪತ್ರ ನೀಡದ ಕಾರಣ, ನಿರ್ಮಾಣ ಸಂಸ್ಥೆಯು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಅಲ್ಲಿಯೂ ಫಲಿತಾಂಶ ಸಿಗಲಿಲ್ಲ. ಇದರಿಂದಾಗಿ ಸಿನಿಮಾ ಬಿಡುಗಡೆ ಕುರಿತು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಇದರ ನಡುವೆ ಸಿನಿಮಾ ಆನ್ಲೈನ್ನಲ್ಲಿ ಸೋರಿಕೆಯಾಗಿತ್ತು.



