July 22, 2026
Wednesday, July 22, 2026
spot_img
Home Blog Page 3

ಕ್ರಿಕೆಟಿಗ ಅಭಿಷೇಕ್ ಪೊರೆಲ್‌ಗೆ ಕಾನೂನು ಸಂಕಷ್ಟ: ಲೈಂಗಿಕ ದೌರ್ಜನ್ಯದ ಆರೋಪದಡಿ ಬಂಧನಕ್ಕೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತೀಯ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿರುವ ಯುವ ಕ್ರಿಕೆಟಿಗ ಅಭಿಷೇಕ್ ಪೊರೆಲ್‌ಗೆ ಸಂಕಷ್ಟ ಎದುರಾಗಿದ್ದು, ಅವರನ್ನು ತಕ್ಷಣವೇ ಬಂಧಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಮೊಗ್ರಾ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಆರೋಪಿ ಕ್ರಿಕೆಟಿಗನ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ತಕ್ಷಣವೇ ವಶಪಡಿಸಿಕೊಳ್ಳಲು ಹೈಕೋರ್ಟ್ ಸೂಚಿಸಿದೆ. ಜುಲೈ 14ರಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರಿದ್ದ ಪೀಠವು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಈ ಮಹತ್ವದ ನಿರ್ದೇಶನ ನೀಡಿದೆ. ಅಭಿಷೇಕ್ ಪೊರೆಲ್‌ನನ್ನು ಶೀಘ್ರವೇ ಪತ್ತೆಹಚ್ಚಿ ಬಂಧನಕ್ಕೆ ಒಳಪಡಿಸಬೇಕು ಮತ್ತು ತನಿಖೆಯನ್ನು ಚುರುಕುಗೊಳಿಸಬೇಕು ಎಂದು ಕೋರ್ಟ್ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ:

ತೃತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ನೀಡಿದ ಗಂಭೀರ ದೂರಿನ ಅನ್ವಯ ಈ ಕಾನೂನು ಕ್ರಮ ಜರುಗಿಸಲಾಗಿದೆ. ಅಭಿಷೇಕ್ ಪೋರೆಲ್ ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ ದೀರ್ಘಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಪೊಲೀಸರ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ:

ಸಾಧನಗಳ ಜಪ್ತಿಗೆ ಕಾರಣ:

ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಇನ್ಯಾವುದೇ ಮಾಧ್ಯಮಗಳಲ್ಲಿ ಯುವತಿಯ ಖಾಸಗಿ ಫೋಟೊಗಳು ಹಾಗೂ ದತ್ತಾಂಶಗಳು (Data) ದುರುಪಯೋಗವಾಗುವುದನ್ನು ತಡೆಯುವುದು ಹೈಕೋರ್ಟ್‌ನ ಮುಖ್ಯ ಉದ್ದೇಶವಾಗಿದೆ. ಹೀಗಾಗಿ, ಆರೋಪಿಯಿಂದ ಯಾವುದೇ ರೀತಿಯ ಖಾಸಗಿ ವಿಚಾರಗಳು ಪ್ರಸಾರವಾಗದಂತೆ ತಡೆಯಲು ಅವರ ಫೋನ್ ಮತ್ತು ಲ್ಯಾಪ್‌ಟಾಪ್ ಜಪ್ತಿ ಮಾಡಲು ನಿರ್ದೇಶಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಮುಂದುವರಿದಿದ್ದು, ಆರೋಪಿಯನ್ನು ಪತ್ತೆಹಚ್ಚಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೊಗ್ರಾ ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಯುವ ಜನತೆಗೆ ಸಚಿವ ಸತೀಶ್ ಜಾರಕಿಹೊಳಿ ಕರೆ: ಮಾದಕ ಮುಕ್ತ ಸಮಾಜಕ್ಕಾಗಿ ‘ಬೇಡ ಬ್ರೋ’ ಅಭಿಯಾನಕ್ಕೆ ಚಾಲನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಳಗಾವಿ: ಯುವಜನತೆ ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನವನ್ನು ಅಳವಡಿಸಿಕೊಂಡರೆ ಮಾತ್ರ ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಭವಿಷ್ಯ ಸುರಕ್ಷಿತವಾಗಿರುತ್ತದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ “ಬೇಡ ಬ್ರೋ” ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಮಾದಕ ವಸ್ತುಗಳು ಯುವಜನರ ಬದುಕನ್ನು ಹಾಳು ಮಾಡುವುದರ ಜತೆಗೆ ದೇಶದ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಸರ್ಕಾರಗಳು ನಿಯಂತ್ರಣಕ್ಕೆ ವಿವಿಧ ಕ್ರಮಗಳನ್ನು ಕೈಗೊಂಡಿದ್ದರೂ ವಿವಿಧ ಮಾರ್ಗಗಳ ಮೂಲಕ ಮಾದಕ ವಸ್ತುಗಳ ಸಾಗಾಣಿಕೆ ನಡೆಯುತ್ತಿರುವುದು ದೊಡ್ಡ ಸವಾಲಾಗಿದೆ ಎಂದರು.

ಯುವಕರು ಕ್ಷಣಿಕ ಆಕರ್ಷಣೆಗೆ ಒಳಗಾಗದೆ ಶಿಕ್ಷಣ, ಶಿಸ್ತು ಮತ್ತು ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಂಡು ತಮ್ಮ ಗುರಿಗಳತ್ತ ಸಾಗಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆ, ಶಿಕ್ಷಣ ಸಂಸ್ಥೆಗಳು, ಪೋಷಕರು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಸಚಿವರು ಹೇಳಿದರು.

ಶಾಸಕ ಆಸೀಫ್ ಸೇಠ ಮಾತನಾಡಿ, ಉನ್ನತ ವ್ಯಾಸಂಗಕ್ಕಾಗಿ ನಗರಗಳಿಗೆ ಬರುವ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು. ವ್ಯಸನದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ಉದಾಹರಣೆಗಳಿದ್ದು, ಯಾವುದೇ ಒತ್ತಡಕ್ಕೆ ಮಣಿಯದೆ ಮಾದಕ ವಸ್ತುಗಳನ್ನು ತಿರಸ್ಕರಿಸುವ ಮನೋಬಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಮಾದಕ ವಸ್ತುಗಳ ಸೇವನೆಯನ್ನು ಪ್ರತಿಷ್ಠೆಯ ವಿಷಯವೆಂದು ಪರಿಗಣಿಸಬಾರದು ಎಂದು ಎಚ್ಚರಿಸಿದರು. ಯುವಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿಹೇಳಿದ ಅವರು ಶಾಯರಿ ಮೂಲಕ ವ್ಯಸನಮುಕ್ತ ಜೀವನದ ಸಂದೇಶ ಸಾರಿದರು.

ಪೊಲೀಸ್ ಆಯುಕ್ತ ಭೊರಸೆ ಗುಲಾಬರಾವ್ ಭೂಷಣ ಮಾತನಾಡಿ, ಮುಖ್ಯಮಂತ್ರಿ ಆರಂಭಿಸಿರುವ ಡ್ರಗ್ಸ್ ಮುಕ್ತ ಅಭಿಯಾನದ ಅಂಗವಾಗಿ ಜಿಲ್ಲೆಯಾದ್ಯಂತ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಕಳೆದ ವರ್ಷ ಮಾದಕ ವಸ್ತುಗಳ ಸಂಬಂಧ 49 ಪ್ರಕರಣಗಳನ್ನು ದಾಖಲಿಸಿ ಸುಮಾರು ₹35 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಮಾದಕ ವಸ್ತುಗಳ ಮಾರಾಟ ಅಥವಾ ಬಳಕೆಯ ಬಗ್ಗೆ ಮಾಹಿತಿ ದೊರೆತರೆ ತಕ್ಷಣ ಪೊಲೀಸ್ ಇಲಾಖೆಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಶತ್ರು ರಾಷ್ಟ್ರಗಳು ಯುವಜನರನ್ನು ವ್ಯಸನಿಗಳನ್ನಾಗಿಸುವ ಮೂಲಕ ದೇಶವನ್ನು ದುರ್ಬಲಗೊಳಿಸುವ ಸಂಚು ರೂಪಿಸುತ್ತಿವೆ ಎಂದು ಎಚ್ಚರಿಸಿದರು. ಯುವಕರು ದೇಶದ ಅಮೂಲ್ಯ ಸಂಪತ್ತಾಗಿದ್ದು, ಮಾದಕ ವಸ್ತುಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿ ಐಎಎಸ್ ಅಧಿಕಾರಿ ರೋಹಿತ್ ಸಿಂಗ್, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತ್ಯಾಗರಾಜ್, ಕುಲಸಚಿವ ಸಂತೋಷ ಕಾಮಗೌಡ, ಪೊಲೀಸ್ ಅಧಿಕಾರಿಗಳು, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ “ಬೇಡ ಬ್ರೋ” ಮತ್ತು “ರೈಸ್” ಅಭಿಯಾನದ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು.

ಪ್ರಧಾನಿ ಮನೆ ಎದುರು ʼಕೈʼ ನಾಯಕರ ಹಠಾತ್ ಧರಣಿ: ಮೋದಿ, ಅಮಿತ್ ಶಾ, ಪ್ರಧಾನ್ ರಾಜೀನಾಮೆಗೆ ಬಿಗಿಪಟ್ಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ಲಾಠಿಚಾರ್ಜ್‌ ವಿರೋಧಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಇಂದು ಪ್ರಧಾನಿ ನರೇಂದ್ರ ಮೋದಿ ಅಧಿಕೃತ ನಿವಾಸದ ಎದುರು ಹಠಾತ್ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.

ದೆಹಲಿಯ ಹೈ-ಸೆಕ್ಯೂರಿಟಿ ವಲಯವಾಗಿರುವ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದ ಎದುರು ನೆಲದ ಮೇಲೆ ಕುಳಿತು ಉಗ್ರ ಪ್ರತಿಭಟನೆ ನಡೆಸಿದ ನಾಯಕರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದರು.

ಪ್ರಮುಖ ನಾಯಕರ ಭಾಗಿ:

ಈ ಹಠಾತ್ ಧರಣಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಕಾಂಗ್ರೆಸ್ ಸಂಸದರು ಮತ್ತು ಹಿರಿಯ ನಾಯಕರು ಭಾಗವಹಿಸಿದ್ದರು.

ಹಿನ್ನೆಲೆ:

ಸೋಮವಾರದಂದು ನೀಟ್ ಅಕ್ರಮ ಖಂಡಿಸಿ ನಡೆದ ‘ಸಂಸತ್ ಚಲೋ’ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದರು. ಈ ಘಟನೆಯಲ್ಲಿ ಗಾಯಗೊಂಡು ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿಗಳನ್ನು ಇಂದು ಬೆಳಗ್ಗೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಅದರ ಬೆನ್ನಲ್ಲೇ ಈ ದಿಢೀರ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.‌

ಇದನ್ನೂ ಓದಿ:

ರಾಹುಲ್ ಗಾಂಧಿ ವಾಗ್ದಾಳಿ:

“ನಿನ್ನೆ ಯುವ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸರ ಕ್ರೂರ ವರ್ತನೆಗೆ ಪ್ರಧಾನಿ ಮೋದಿ ಅವರಿಂದ ಉತ್ತರ ಕೇಳಲು ನಾವು ಇಲ್ಲಿಗೆ ಬಂದಿದ್ದೇವೆ. ದೇಶದ ಯುವಜನರ ಭವಿಷ್ಯವನ್ನು ಹಾಳುಗೆಡವಿರುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ರಾಹುಲ್ ಗಾಂಧಿ ಅವರು ಎಕ್ಸ್ ವೇದಿಕೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ನಿವಾಸದ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪ್ರತಿಭಟನಾ ನಿರತ ಕಾಂಗ್ರೆಸ್ ನಾಯಕರನ್ನು ಮನವೊಲಿಸಿ ಧರಣಿ ಕೊನೆಗೊಳಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರೊಬ್ಬರು ಪ್ರಧಾನಿ ನಿವಾಸದ ಎದುರೇ ಹೀಗೆ ನೇರ ಧರಣಿ ಕುಳಿತಿರುವುದು ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಸಂಸತ್ ಚಲೋ ಘರ್ಷಣೆ ಬಳಿಕ ರಾಜಕೀಯ ಸಮರ: ‘ವಿದ್ಯಾರ್ಥಿಗಳ ಧ್ವನಿ ಅಡಗಿಸಬೇಡಿ’; ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

NEET ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆದ ‘ಸಂಸತ್ ಚಲೋ’ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕ್ರಮ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳಲಿ: ರಾಹುಲ್ ಆಗ್ರಹ

ಸಂಸತ್ ಆವರಣದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ಭಾರತೀಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳಬೇಕು ಹಾಗೂ ಈ ವಿಚಾರದಲ್ಲಿ ಜವಾಬ್ದಾರಿ ವಹಿಸಬೇಕು ಎಂದು ಒತ್ತಾಯಿಸಿದರು.

ಪರೀಕ್ಷಾ ವ್ಯವಸ್ಥೆ ಕುಸಿದಿದೆ ಎಂದು ಆರೋಪ

ದೇಶದ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆಗಳಿವೆ ಎಂದು ರಾಹುಲ್ ಗಾಂಧಿ ಹೇಳಿದರು. “ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸುವ ಬದಲು ಬಲಪ್ರಯೋಗ ಮಾಡಲಾಗುತ್ತಿದೆ” ಎಂದು ಟೀಕಿಸಿದರು.‌

ಇದನ್ನೂ ಓದಿ:

ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

NEET ಅಕ್ರಮ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಜೊತೆಗೆ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಹೊಣೆಗಾರಿಕೆಗೆ ಗೃಹ ಸಚಿವ ಅಮಿತ್ ಶಾ ಅವರಿಂದಲೂ ಉತ್ತರ ಬೇಕು ಎಂದು ರಾಹುಲ್ ಹೇಳಿದ್ದಾರೆ.

ವಿಂಬಲ್ಡನ್ ಕೋರ್ಟ್‌ನಲ್ಲಿ ‘ಮೇಡ್ ಇನ್ ಇಂಡಿಯಾ’ ಕಾರುಬಾರು: ಚಾಂಪಿಯನ್‌ಗಳ ಹೆಗಲ ಮೇಲಿನ ಟವೆಲ್‌ ಹಿಂದಿದೆ ರೋಚಕ ಕಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಆಟಗಾರರ ಹೆಗಲ ಮೇಲೆ ಕಾಣಿಸುವ ಪ್ರಸಿದ್ಧ ಟವೆಲ್‌ ಕೇವಲ ಒಂದು ಸಾಮಾನ್ಯ ಟವೆಲ್‌ ಅಲ್ಲ. ಇದರ ಹಿಂದೆ 175 ವರ್ಷಗಳ ಬ್ರಿಟಿಷ್ ಪರಂಪರೆ ಮತ್ತು ಭಾರತದ ಉತ್ಪಾದನಾ ಸಾಮರ್ಥ್ಯದ ಆಸಕ್ತಿದಾಯಕ ಕಥೆಯಿದೆ. ವಿಶ್ವದ ಅತ್ಯಂತ ಪ್ರತಿಷ್ಠಿತ ಟೆನಿಸ್ ಟೂರ್ನಿಯ ಅಧಿಕೃತ ಟವೆಲ್‌ಗಳು ಇಂದು ಬ್ರಿಟನ್‌ನಲ್ಲಿ ಅಲ್ಲ, ಭಾರತದ ಗುಜರಾತ್‌ನಲ್ಲಿ ತಯಾರಾಗುತ್ತಿವೆ.

1850ರಲ್ಲಿ ಆರಂಭವಾದ ಬ್ರಿಟಿಷ್ ಪರಂಪರೆ

ಈ ಕಥೆ 1850ರಲ್ಲಿ ಮ್ಯಾಂಚೆಸ್ಟರ್‌ನ ‘ಕ್ರಿಸ್ಟಿ’ ಎಂಬ ಹತ್ತಿ ಗಿರಣಿಯಿಂದ ಆರಂಭವಾಗುತ್ತದೆ. ಇಂಗ್ಲೆಂಡ್‌ನ ರಾಜಮನೆತನಕ್ಕಾಗಿ ತಯಾರಿಸಿದ ಆರಂಭಿಕ ಟವೆಲ್‌ಗಳಲ್ಲಿ ಒಂದನ್ನು ಇದೇ ಸಂಸ್ಥೆ ನಿರ್ಮಿಸಿತ್ತು ಎನ್ನಲಾಗಿದೆ. ಬಳಿಕ 1987ರಲ್ಲಿ ಕ್ರಿಸ್ಟಿ ಸಂಸ್ಥೆ ವಿಂಬಲ್ಡನ್‌ನ ಅಧಿಕೃತ ಟವೆಲ್ ಪೂರೈಕೆದಾರನಾಯಿತು.

2006ರಲ್ಲಿ ಭಾರತದ ಹೋಮ್ ಟೆಕ್ಸ್ಟೈಲ್ ಕಂಪನಿ ವೆಲ್‌ಸ್ಪನ್ ಕ್ರಿಸ್ಟಿಯನ್ನು ಸ್ವಾಧೀನಪಡಿಸಿಕೊಂಡಿತು. ನಂತರ ಹಂತ ಹಂತವಾಗಿ ಉತ್ಪಾದನಾ ಕಾರ್ಯಗಳು ಭಾರತಕ್ಕೆ ಸ್ಥಳಾಂತರಗೊಂಡವು. 2010ರ ವೇಳೆಗೆ ವಿಂಬಲ್ಡನ್‌ನ ಅಧಿಕೃತ ಟವೆಲ್‌ಗಳ ತಯಾರಿ ಗುಜರಾತ್‌ನ ವೆಲ್‌ಸ್ಪನ್ ಘಟಕಗಳಲ್ಲಿ ಆರಂಭವಾಯಿತು.

ಒಂದು ಟವೆಲ್ ತಯಾರಿಸಲು ಬೇಕಾಗುವ ಸಮಯ

ವಿಂಬಲ್ಡನ್ ಟವೆಲ್ ತಯಾರಿ ಸಾಮಾನ್ಯ ಉತ್ಪಾದನಾ ಪ್ರಕ್ರಿಯೆಯಲ್ಲ. ಪ್ರತಿ ವರ್ಷದ ವಿನ್ಯಾಸವನ್ನು ಟೂರ್ನಿಗೆ ಸುಮಾರು 18 ತಿಂಗಳು ಮುಂಚೆಯೇ ಅಂತಿಮಗೊಳಿಸಲಾಗುತ್ತದೆ.

ವಿಶೇಷ ‘ಯಾರ್ನ್-ಡೈಡ್ ಜ್ಯಾಕಾರ್ಡ್ ವೀವಿಂಗ್’ ತಂತ್ರಜ್ಞಾನ ಬಳಸಿ ಟವೆಲ್‌ಗಳನ್ನು ತಯಾರಿಸಲಾಗುತ್ತದೆ. ಇದರಲ್ಲಿ ಬಣ್ಣದ ನೂಲನ್ನು ನೇರವಾಗಿ ಬಟ್ಟೆಯೊಳಗೆ ನೇಯಲಾಗುತ್ತದೆ. ಒಂದು ಟವೆಲ್ ಸಂಪೂರ್ಣ ಸಿದ್ಧವಾಗಲು ಸುಮಾರು ಏಳು ದಿನಗಳು ಬೇಕಾಗುತ್ತವೆ.

ಪುರುಷರ ಟವೆಲ್‌ಗಳಲ್ಲಿ ವಿಂಬಲ್ಡನ್‌ನ ಸಾಂಪ್ರದಾಯಿಕ ಹಸಿರು, ನೇರಳೆ ಮತ್ತು ಚಿನ್ನದ ಬಣ್ಣಗಳು ಕಾಣಿಸಿಕೊಂಡರೆ, ಮಹಿಳಾ ಆಟಗಾರರ ಟವೆಲ್‌ಗಳಿಗೆ ಪ್ರತಿವರ್ಷ ಹೊಸ ಬಣ್ಣ ವಿನ್ಯಾಸ ನೀಡಲಾಗುತ್ತದೆ.

ಆಟಗಾರರು ಮನೆಗೆ ತೆಗೆದುಕೊಂಡು ಹೋಗುವ ಟವೆಲ್

ಒಂದು ಕಾಲದಲ್ಲಿ ಆಟ ಮುಗಿದ ಬಳಿಕ ಆಟಗಾರರು ಟವೆಲ್‌ಗಳನ್ನು ಹಿಂತಿರುಗಿಸಬೇಕಿತ್ತು. ಆದರೆ ಆಟಗಾರರ ಆಸಕ್ತಿ ಮತ್ತು ಬೇಡಿಕೆಯಿಂದಾಗಿ ಈ ನಿಯಮವನ್ನು ಸಡಿಲಿಸಲಾಗಿದೆ.

ಪ್ರತಿವರ್ಷ ಹೆಚ್ಚಿನ ಸಂಖ್ಯೆಯ ಟವೆಲ್‌ಗಳು ಆಟಗಾರರೊಂದಿಗೆ ಮನೆಗೆ ತೆರಳುತ್ತವೆ. ನೋವಾಕ್ ಜೊಕೊವಿಚ್, ರೋಜರ್ ಫೆಡರರ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ವಿಂಬಲ್ಡನ್ ಟವೆಲ್‌ಗಳನ್ನು ಸಂಗ್ರಹಿಸುವ ಅಭ್ಯಾಸ ಹೊಂದಿದ್ದಾರೆ.‌

ಇದನ್ನೂ ಓದಿ:

ಭಾರತದ ಉತ್ಪಾದನಾ ಶಕ್ತಿಗೆ ಸಾಕ್ಷಿ

ಈ ಟವೆಲ್ ಕಥೆ ಕೇವಲ ಒಂದು ಕ್ರೀಡಾ ವಸ್ತುವಿನ ಕಥೆಯಲ್ಲ. ಜಾಗತಿಕ ಬ್ರ್ಯಾಂಡ್‌ಗಳ ಪ್ರಮುಖ ಉತ್ಪನ್ನಗಳು ಇಂದು ಭಾರತದಲ್ಲಿ ತಯಾರಾಗುತ್ತಿರುವುದಕ್ಕೆ ಇದು ಉದಾಹರಣೆಯಾಗಿದೆ.

ಗುಜರಾತ್‌ನ ವೆಲ್‌ಸ್ಪನ್ ಘಟಕಗಳಲ್ಲಿ ತಯಾರಾಗುವ ಈ ಟವೆಲ್‌ಗಳು ಬ್ರಿಟಿಷ್ ಪರಂಪರೆಯ ಭಾಗವಾಗಿ ವಿಶ್ವದ ಕ್ರೀಡಾಂಗಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಚಾಂಪಿಯನ್ ಆಟಗಾರರ ಹೆಗಲ ಮೇಲೆ ಕಾಣಿಸುವ ಈ ಟವೆಲ್, ಭಾರತದ ಜವಳಿ ಉದ್ಯಮದ ಸಾಮರ್ಥ್ಯವನ್ನೂ ಜಗತ್ತಿಗೆ ತೋರಿಸುತ್ತಿದೆ.

ತೆಲಂಗಾಣ ಸರ್ಕಾರದಿಂದ ಇಂದಿರಮ್ಮ ಹೌಸಿಂಗ್ ಸ್ಕೀಮ್ ಲಾಂಚ್: 5 ಲಕ್ಷ ಸಬ್ಸಿಡಿ, ಮಹಿಳೆಯರಿಗೆ ಶೇ.30 ಮೀಸಲಾತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹೈದರಾಬಾದ್ ನಗರ ಪ್ರದೇಶದಲ್ಲಿ ಸ್ವಂತ ಮನೆ ಹೊಂದುವ ಬಡ ಮತ್ತು ಮಧ್ಯಮ ವರ್ಗದ ಜನರ ಕನಸನ್ನು ನನಸು ಮಾಡಲು ತೆಲಂಗಾಣ ಸರ್ಕಾರ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದೆ.

ನಗರದ ಬಡವರಿಗಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಬಹುಮಹಡಿ ಫ್ಲಾಟ್‌ಗಳನ್ನು ನಿರ್ಮಿಸಿಕೊಡುವ ಮಹತ್ವಾಕಾಂಕ್ಷೆಯ ‘ಇಂದಿರಮ್ಮ ಇಂಡ್ಲು – ಅಫರ್ಡಬಲ್ ಹೌಸಿಂಗ್ ಸ್ಕೀಮ್’ ಯೋಜನೆಗೆ ವಸತಿ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅಧಿಕೃತ ಚಾಲನೆ ನೀಡಿದ್ದಾರೆ.

6 ಲಕ್ಷ ರೂಪಾಯಿಗೆ ಸಿಗಲಿದೆ ಫ್ಲಾಟ್:

ಯೋಜನೆಯಡಿ ನಿರ್ಮಾಣವಾಗಲಿರುವ ಪ್ರತಿ ಫ್ಲಾಟ್‌ನ ಒಟ್ಟು ಅಂದಾಜು ವೆಚ್ಚ 11 ಲಕ್ಷ ಆಗಿದೆ. ಇದರಲ್ಲಿ ತೆಲಂಗಾಣ ಸರ್ಕಾರವೇ 5 ಲಕ್ಷ ಸಬ್ಸಿಡಿ (ಸಹಾಯಧನ) ನೀಡಲಿದ್ದು, ಫಲಾನುಭವಿಗಳು ಕೇವಲ 6 ಲಕ್ಷ ಪಾವತಿಸಿದರೆ ಸಾಕು. ಹೈದರಾಬಾದ್‌ನ ಪ್ರಮುಖ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಯನ್ನು ಉಚಿತವಾಗಿ ಒದಗಿಸಲಾಗುತ್ತಿದ್ದು, ಫಲಾನುಭವಿಗಳಿಗೆ ಭೂಮಿಯ ಯಾವುದೇ ಶುಲ್ಕ ಇರುವುದಿಲ್ಲ.

ಮೊದಲ ಹಂತದಲ್ಲಿ 7,680 ಫ್ಲಾಟ್‌ಗಳು:

ಹೈದರಾಬಾದ್ ಕೋರ್ ಅರ್ಬನ್ ರೀಜನ್ (CURE) ವ್ಯಾಪ್ತಿಯ 16 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತವಾಗಿ 7,680 ಲೋ ಇನ್‌ಕಮ್ ಗ್ರೂಪ್ (LIG) ಫ್ಲಾಟ್‌ಗಳನ್ನು ನಿರ್ಮಿಸಲಾಗುವುದು. ಒಟ್ಟಾರೆಯಾಗಿ 1 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಪ್ರತಿ ಫ್ಲಾಟ್ 528 ಚದರ ಅಡಿ ಬಿಲ್ಟ್-ಅಪ್ ಏರಿಯಾ (400 ಚದರ ಅಡಿ ಕಾರ್ಪೆಟ್ ಏರಿಯಾ) ಹೊಂದಿರಲಿದೆ.

ಇದನ್ನೂ ಓದಿ:

ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಫಲಾನುಭವಿಗಳು ಆಗಸ್ಟ್ 10, 2026 ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.  ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ಮೀರಬಾರದು. ಜತೆಗೆ ಔಟರ್ ರಿಂಗ್ ರೋಡ್ ವ್ಯಾಪ್ತಿಯಲ್ಲಿ ಸ್ವಂತ ಮನೆ ಅಥವಾ ನಿವೇಶನ ಹೊಂದಿರಬಾರದು. ಕನಿಷ್ಠ 10 ವರ್ಷಗಳಿಂದ ನಗರದ ನಿವಾಸಿಯಾಗಿರಬೇಕು. ಈ ಯೋಜನೆಯಲ್ಲಿ ಶೇ. 30 ರಷ್ಟು ಫ್ಲಾಟ್‌ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

ಹತ್ತಿರದ ‘ಮೀಸೇವಾ’ ಕೇಂದ್ರಗಳು, ಮೀಸೇವಾ ಪೋರ್ಟಲ್ ಅಥವಾ ಅಧಿಕೃತ ವಾಟ್ಸಾಪ್ ಸಂಖ್ಯೆ ಮೂಲಕ ಅರ್ಜಿ ಸಲ್ಲಿಸಬಹುದು.

SNACKS| ಇಷ್ಟು ದಿನ ಈ ರೆಸಿಪಿ ಗೊತ್ತಿಲ್ದೇ ಮಿಸ್ ಮಾಡಿದ್ರಾ? ಇಲ್ಲಿದೆ ಗರಿಗರಿಯಾದ ರಾಗಿ ಪಕೋಡ!

ಆರೋಗ್ಯಕರ ಜೀವನಶೈಲಿಗೆ ರಾಗಿ ಅತ್ಯುತ್ತಮ ಧಾನ್ಯ. ಕ್ಯಾಲ್ಸಿಯಂ ಮತ್ತು ನಾರಿನಂಶ ಸಮೃದ್ಧವಾಗಿರುವ ರಾಗಿಯಿಂದ ಕೇವಲ ರೊಟ್ಟಿ, ಮುದ್ದೆ ಮಾತ್ರವಲ್ಲ, ಅದ್ಭುತವಾದ ಸಂಜೆಯ ಸ್ನಾಕ್ಸ್ ಕೂಡ ಮಾಡಬಹುದು. ಎಣ್ಣೆ ತಿಂಡಿ ತಿನ್ನಲು ಹಿಂಜರಿಯುವವರು ಕೂಡ ಧೈರ್ಯವಾಗಿ ಸವಿಯಬಹುದಾದ ಗರಿಗರಿಯಾದ ‘ರಾಗಿ ಪಕೋಡ’ ರೆಸಿಪಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು

ರಾಗಿ ಹಿಟ್ಟು

ಈರುಳ್ಳಿ

ಹಸಿಮೆಣಸಿನಕಾಯಿ

ಶುಂಠಿ

 ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು

ಜೀರಿಗೆ

ಅಚ್ಚಕಾರದ ಪುಡಿ

ಉಪ್ಪು

ಬಿಸಿ ಎಣ್ಣೆ / ತುಪ್ಪ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಉದ್ದವಾಗಿ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಕರಿಬೇವು, ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕೈಯಿಂದ ಚೆನ್ನಾಗಿ ಮಿಕ್ಸ್‌ ಮಾಡಿ, ಅದೇ ಪಾತ್ರೆಗೆ ಜೀರಿಗೆ ಮತ್ತು ಅಚ್ಚ ಖಾರದ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ.  ನಂತರ 1 ಕಪ್ ರಾಗಿ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿ. ಇದಕ್ಕೆ 1 ಚಮಚ ಬಿಸಿ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ. ಇದು ಪಕೋಡ ಹೆಚ್ಚು ಗರಿಗರಿಯಾಗಲು ಸಹಾಯ ಮಾಡುತ್ತದೆ. ಪಕೋಡ ಹಿಟ್ಟಿಗೆ ಒಮ್ಮೆಲೇ ನೀರು ಸುರಿಯಬಾರದು. ಕೇವಲ ಸ್ವಲ್ಪ ನೀರನ್ನು ಚಿಮುಕಿಸುತ್ತಾ, ಈರುಳ್ಳಿ ಮತ್ತು ಹಿಟ್ಟು ಒಂದಕ್ಕೊಂದು ಅಂಟಿಕೊಳ್ಳುವಂತೆ ಗಟ್ಟಿಯಾಗಿ ಕಲಸಿಕೊಳ್ಳಬೇಕು.

ಬಳಿಕ ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟು. ಎಣ್ಣೆ ಚೆನ್ನಾಗಿ ಕಾದ ನಂತರ, ಉರಿಯನ್ನು ಮಧ್ಯಮ ಉರಿಯಲ್ಲಿ ಇಟ್ಟು, ಕಲಸಿದ ಮಿಶ್ರಣವನ್ನು ಪಕೋಡ ಆಕಾರದಲ್ಲಿ ಎಣ್ಣೆಗೆ ಬಿಡಬೇಕು. ಪಕೋಡವನ್ನು ಎರಡು ಕಡೆ ತಿರುಗಿಸಿ ಹಾಕುತ್ತಾ, ಅದು ಚೆನ್ನಾಗಿ ಬೆಂದು ಗರಿಗರಿಯಾಗುವ ತನಕ ಕರಿಯಿರಿ. ಈಗ ಬಿಸಿಬಿಸಿಯಾದ, ಪೌಷ್ಟಿಕಾಂಶಯುಕ್ತ ರಾಗಿ ಪಕೋಡ ಸವಿಯಲು ಸಿದ್ಧ.

ಹೈಕಮಾಂಡ್ ತೀರ್ಮಾನವೇ ಅಂತಿಮ; ಯಾರಿಗೆ ಸಚಿವ ಸ್ಥಾನ ಸಿಕ್ಕರೂ ನಮ್ಮವರೇ: ಸತೀಶ್ ಜಾರಕಿಹೊಳಿ

ಹೊಸದಿಗಂತ ವರದಿ ಬೆಳಗಾವಿ;

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್ ಯಾರಿಗೆ ಸಚಿವ ಸ್ಥಾನ ನೀಡಿದರೂ ಅವರು ನಮ್ಮವರೇ ಆಗಿದ್ದು, ಬೆಳಗಾವಿ ಜಿಲ್ಲೆಯ ಮೂವರು ನಾಯಕರ ಹೆಸರುಗಳು ಚರ್ಚೆಯಲ್ಲಿವೆ. ಅವರಲ್ಲಿ ಯಾರಿಗೆ ಅವಕಾಶ ದೊರೆತರೂ ಜಿಲ್ಲೆಗೆ ಅನುಕೂಲವಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯ ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿದ್ದು, ಬೆಳಗಾವಿ ಜಿಲ್ಲೆಗೆ ಒಂದು ಸಚಿವ ಸ್ಥಾನ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ನಗರ ದೊಡ್ಡ ಪ್ರದೇಶವಾಗಿರುವುದರಿಂದ ಅಲ್ಲಿನ ಮುಸ್ಲಿಂ ಸಮುದಾಯಕ್ಕೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಬೆಳಗಾವಿ ಭಾಗದ ಮುಸ್ಲಿಂ ಸಮುದಾಯಕ್ಕೂ ಅವಕಾಶ ದೊರೆಯುತ್ತದೆಯೇ ಎಂಬುದು ಹೈಕಮಾಂಡ್ನ ಅಂತಿಮ ತೀರ್ಮಾನದ ಮೇಲೆ ಅವಲಂಬಿತವಾಗಿದೆ. ಇದಕ್ಕಾಗಿ ಕಾದು ನೋಡಬೇಕಿದೆ ಎಂದು ಹೇಳಿದರು.

ಹಿರಿಯ ನಾಯಕರ ಅನುಭವ, ಪ್ರಾದೇಶಿಕ ಸಮತೋಲನ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಸಚಿವ ಸ್ಥಾನಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಡ್ರಗ್ಸ್ ವಿರುದ್ಧ ಗ್ರಾಮೀಣ ಪ್ರದೇಶದಲ್ಲೂ ಜಾಗೃತಿ:

ರಾಜ್ಯದಲ್ಲಿ ಡ್ರಗ್ಸ್ ಹಾವಳಿ ತಡೆಯಲು ನಗರ ಪ್ರದೇಶಗಳಷ್ಟೇ ಅಲ್ಲದೆ ಗ್ರಾಮೀಣ ಭಾಗಗಳಲ್ಲಿಯೂ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ವ್ಯಸನಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ಸರ್ಕಾರ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

ವಿದೇಶಗಳಿಂದ ಅಕ್ರಮವಾಗಿ ಡ್ರಗ್ಸ್ ಪೂರೈಕೆಯಾಗುತ್ತಿದ್ದು, ರಾಜಸ್ಥಾನ ಹಾಗೂ ಪಂಜಾಬ್ ರಾಜ್ಯಗಳಲ್ಲಿ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಮಾರ್ಗವಾಗಿ ಕೇರಳಕ್ಕೆ ಡ್ರಗ್ಸ್ ಸಾಗಾಟವಾಗುತ್ತಿರುವ ಮಾಹಿತಿ ಲಭ್ಯವಾಗಿದ್ದು, ಅಕ್ರಮ ಸಾಗಾಟದ ವೇಳೆ ರಾಜ್ಯದಲ್ಲಿ ಹಲವು ಬಾರಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.

ನೀಟ್ ಪ್ರತಿಭಟನೆಗೆ ಕೇಂದ್ರ ಸ್ಪಂದಿಸಲಿ: ನೀಟ್ ಅಕ್ರಮ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಚಿವರು, ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಬೇಕು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸಿರುವವರು ವಿದ್ಯಾರ್ಥಿಗಳೇ ಹೊರತು ರಾಜಕೀಯ ನಾಯಕರು ಅಲ್ಲ. ಅವರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಇದನ್ನೂ ಓದಿ:

ಬರ ಪರಿಸ್ಥಿತಿ ಕುರಿತು ಸಮೀಕ್ಷೆ:

ರಾಜ್ಯದ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳಿಗೆ ಸಮಗ್ರ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಬರ ಘೋಷಣೆಗೆ ಕೇಂದ್ರ ಸರ್ಕಾರದ ಅನುಮೋದನೆ ಅಗತ್ಯವಾಗಿದೆ ಎಂದು ಸಚಿವರು ತಿಳಿಸಿದರು. ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಈ ವೇಳೆ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮಹಮ್ಮದ್ ರೋಷನ್, ಇದ್ದರು.

ಜಿಪ್‌ಲೈನ್ ದುರಂತ : ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ದಾಂಡೇಲಿ

ದಾಂಡೇಲಿ : ತಾಲೂಕಿನ ಕೋಗಿಲಬನ – ಬಡಕಾನಶಿರಡಾ ಗ್ರಾ.ಪಂ ವ್ಯಾಪ್ತಿಯ ಬಡಕಾನಶಿರಡಾದಲ್ಲಿರುವ ಸ್ಟಾರ್ಲಿಂಗ್ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಅಪಘಾತದಲ್ಲಿ ಪ್ರವಾಸಿಗರೊಬ್ಬರು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕ ಸೇರಿದಂತೆ ಮೂವರ ವಿರುದ್ಧ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.

ಜುಲೈ 3ರಂದು ನಡೆದ ಈ ಘಟನೆಯಲ್ಲಿ ಕುಬೇರ ಸುರುಪುರ (40) ಎಂಬ ಪ್ರವಾಸಿಗ ಜಿಪ್‌ಲೈನ್ ಚಟುವಟಿಕೆಯಲ್ಲಿ ಭಾಗವಹಿಸಿದ್ದ ವೇಳೆ ಸುರಕ್ಷತಾ ಬೆಲ್ಟ್ (ಹಾರ್ನೆಸ್) ತುಂಡಾಗಿ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಇದೀಗ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರೆಸಾರ್ಟ ಮಾಲೀಕ ಉಸ್ಮಾನ್ ವಹಾಬ್, ಸಿಬ್ಬಂದಿಗಳಾದ ರಾಘವೇಂದ್ರ, ಪವನ್ ಮೇಲೆಬಿ.ಎನ್.ಎಸ್ ಕಲಂ‌289 ,125(B) ,ಸಹಿತ 3(5) ಬಿ.ಎನ್.ಎಸ್ 2023 ,ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನಲ್ಲಿ ದುರ್ಘಟನೆ: ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಹುಣಸೂರು ತಾಲೂಕಿನ ನ್ಯೂ ಮಾರುತಿ ಬಡಾವಣೆಯಲ್ಲಿ ದುರ್ಘಟನೆ ನಡೆದಿದ್ದು, ಹರೀಶ್‌ ತನ್ನ ಪತ್ನಿ ಹಾಗೂ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಡೆತ್ ನೋಟ್ ಬರೆದಿಟ್ಟು ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನಾ ಸ್ಥಳಕ್ಕೆ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್‌ನೋಟ್‌ನಲ್ಲಿ ಏನಿದೆ ಎನ್ನುವ ವಿಷಯವನ್ನು ಪೊಲೀಸರು ರಿವೀಲ್‌ ಮಾಡಿಲ್ಲ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !